Monday, November 2, 2009

ಮುಖ ಮುಖವಾಡಕ್ಕೆ ಬಲಿಯಾಗಿದೆ

ಓ ಮನಸೇಯಲ್ಲಿ ನಾನು ಅತ್ಯಂತ ಪ್ರೀತಿಯಿಂದ ಬರೆಯುವ ಕಾಲಂ ಇನ್ಬಾಕ್ಸ್. ಹಾಗೇ ಹೆಚ್ಚು ತಲೆಕೆಡಿಸಿಕೊಂಡು ಬರೆಯುವ ಕಾಲಂ ಸಹ ಅದೆ. ಅದಕ್ಕೆ ಅದರದೇ ಆದ ಸಾವಿರಾರು ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಕೆಲಸದ ಒತ್ತಡದಿಂದಲೋ ಅಥವಾ ನನ್ನ ಸೋಮಾರಿತನದಿಂದಲೋ ಒಂದಷ್ಟು ಕಾಲ ಬರೆಯಲಾಗಿರಲಿಲ್ಲ. ರವಿ ಬೆಳಗೆರೆ ಕೂಡ ಅದೇನೋ ಇನ್ಬಾಕ್ಸ್ ಅಂತ ಬರಿತೀರಲ್ಲ ರವಿ ಅದಕ್ಕೆ ತುಂಬಾ ಜನ ಓದುಗರಿದ್ದಾರೆ ಮತ್ತೆ ಬರೀರಿ ಅನ್ನುವ ಪ್ರೀತಿ ತೋರಿಸಿದ್ದರು. ಆದರೆ ನನಗೇ ಯಾಕೋ ಸಾಧ್ಯವಾಗಿರಲಿಲ್ಲ. ಕೆಲವೊಮ್ಮೆ ಬರೀಬೇಕು ಅನ್ನುವ ತುಡಿತ ಇದ್ದರೂ ಮನಸು ಚಂಡಿ ಹಿಡಿದು ಕುಳಿತುಬಿಡುತ್ತದೆ. ಜಪ್ಪಯ್ಯ ಅಂದರೂ ಒಂದು ಸಾಲು ಬರೆಯಲಾಗುವುದಿಲ್ಲ. ಎಲ್ಲಾ ಸರಿ ಇದೆ ಇನ್ನೇನು ಬರೆದುಬಿಡೋಣ ಅಂತ ಕೂತರೆ ಇನ್ನೇನೋ ಅವಾಂತರ. ಒಟ್ಟಿನಲ್ಲಿ ಇನ್ಬಾಕ್ಸ್ಗೆ ಕಲ್ಲುಬಿದ್ದಿತ್ತು.
ಈಗ ಮತ್ತೆ ಎರಡು ಸಂಚಿಕೆಯಿಂದ ಬರೆಯಲು ತೊಡಗಿದ್ದೇನೆ. ಅದೇ ಶ್ರದ್ಧೆಯಿಂದ ಅದೇ ಪ್ರೀತಿಯಿಂದ. ಓದಿಕೊಳ್ಳಿ.

ಇನ್ನು
ಕಾರಣ ಸಾಕು
ಆಚೆ ಹೋಗು
ಎದೆಯಿಂದ
ಅಲ್ಲೀಗ
ಪಟ್ಟಾಭಿಷೇಕ
ನಡೆಯುತ್ತಿದೆ
ಇನ್ನೊಬ್ಬನಿಗೆ
*
ನೆಲ
ಅಗೆದು
ನೀರು ಕೊಡಬಲ್ಲೆ
ಎದೆ ಬಗೆದು
ಹೇಗೆ ಕೊಡಲಿ
ರಕುತ
*
ನೀನು
ಎಲ್ಲಾ ಕೇಳಿದೆ
ನನ್ನ ಬಳಿ
ಪ್ರೀತಿಯೊಂದನ್ನು
ಬಿಟ್ಟು
*
ನನಗೊಂದು
ಆಸೆ ಇದೆ
ನಿನ್ನ
ತೋಳ ತೆಕ್ಕೆಯಲಿ
ಸಾಯಬೇಕೆಂದು
*
ಪ್ರೀತಿ ಅಂದರೆ
ದೇವರ
ಕಾಲ ಕೆಳಗಿನ
ಹೂವಲ್ಲ
ಅದು
ನೀಲಾಂಜನ
*
ನಾವು
ಕಾಮವನ್ನು
ಬಿಡಬಹುದು
ಕಾಮ
ನಮ್ಮನ್ನು
ಬಿಡೋಲ್ಲ
*
ನನಗೆ
ಅಳುವುದಕ್ಕೆ ಬಿಡು
ದೇವರೇ
ಇನ್ನಾದರೂ
ಅವಳ
ನೆನಪು
ಸಾಯಲಿ
*
ಕಷ್ಟ ಬಂದಾಗ
ದೇವರೇ
ನನಗೊಂದು
ದೊಡ್ಡ
ಕಷ್ಟ ಇದೆ
ಏನು ಮಾಡಲಿ
ಅನ್ನಬೇಡಿ
ಕಷ್ಟವೇ
ನನ್ನಲ್ಲಿ
ದೊಡ್ಡ ದೇವರಿದ್ದಾನೆ ಎನ್ನಿ
*
ಗೊತ್ತಾಗುತ್ತೆ ಬಿಡು
ನಿನಗೂ
ಒಡೆದ ಹೃದಯದ
ನೋವು
ಏನೆಂದು!
*
ಸೋಲುವುದು
ಸುಲಭ
ಗೆಲ್ಲುವುದು ಕಷ್ಟ
ಅದಕ್ಕೆ
ನಾನು ನಿನಗೆ
ಸೋತಿದ್ದು
*
ತುಂಬಾ ಜನ
ಪ್ರಪೋಸ್ ಮಾಡಿದ್ರು
ನಂಗೆ ಇಷ್ಟ ಇಲ್ಲ ಅಂದೆ
ಈಗ
ಅವರೆಲ್ಲ
ಸುಖವಾಗಿದಾರೆ
*
ನೀನು ಕೊಟ್ಟ
ಗುಲಾಬಿ
ಬಣ್ಣ
ಕಳಕೊಂಡಿದೆ
*
ಎಂದಿಗಿಂತ
ಇಂದು
ರುಚಿಯಾಗಿತ್ತು ಕಣೆ
ಕಾಫಿ
ನಿನ್ನ
ಪ್ರೀತಿ
ಬೆರೆಸಿದ್ಯಾ?
*
ನಿನಗೊಂದು
ಮಾತೂ ಹೇಳದೆ
ಸತ್ತು ಹೋಗಬಹುದು
ನಾನು
ಡೋಂಟ್ ವರಿ
ಸತ್ತ ಮೇಲೂ
ನಿನ್ನ
ಪ್ರೀತಿಸುವುದಿದ್ದರೆ
ಅದು
ನಾನು ಮಾತ್ರ
*
ಪ್ರತಿ ಕಣ್ಣೀರೂ
ದುಃಖದ್ದಲ್ಲ
ಪ್ರತಿ ನಗುವೂ
ಸುಖದ್ದಲ್ಲ
ಪ್ರತಿ ಮೌನವೂ
ಏಕಾಂತದ್ದಲ್ಲ
ಮುಖ
ಮುಖವಾಡಕ್ಕೆ
ಬಲಿಯಾಗಿದೆ
*
ದೇವರು
ಒಂದು ಹೂ ಮಾಡಿ
ಜೇನಿನಲ್ಲಿ ಅದ್ದಿ
ಇಟ್ಕೋ ಅಂತ ಕೊಟ್ಟ
ಅದು
ನೀನೇ ಕಣೆ
*
ಒದ್ದೆಯಾದ
ಮಣ್ಣ ಮೇಲೆ ನಿಂತು
ಆಚೆ ಬಂದಾಗಲೂ
ಉಳಿದುಬಿಡುತ್ತದಲ್ಲ
ಗುರುತು
ಹಾಗೇ ಪ್ರೀತಿ
*
ಪುಟ್ಟ ಕಥೆ ಹೇಳ್ತೀನಿ
ಅವನು ನಕ್ಕ
ಇವಳೂ ನಕ್ಕಳು
ಮಗು ಮಾತ್ರ
ಅಳ್ತಿತ್ತು
*
ಮಳೆ ಅಂದ್ರೆ
ಇಷ್ಟ ಅಂದವರೆ
ಬಂದಾಗ
ಛತ್ರಿ ಹುಡುಕ್ತಾರೆ
ಸೂರ್ಯ ಅಂದ್ರೆ
ಇಷ್ಟ ಅಂದವರೆ
ನೆರಳು ಹುಡುಕ್ತಾರೆ
ತಂಗಾಳಿ ಬೀಸಲಿ
ಅಂದವರೆ
ಬಂದಾಗ ಕಿಟಕಿ ಹಾಕ್ತಾರೆ
ಅದಕ್ಕೇ ಗೆಳೆಯ
ಯಾರಾದ್ರೂ
ಐ ಲವ್ ಯೂ
ಅಂದಾಗೆಲ್ಲ
ನನಗೆ ಭಯ
*
ಏನೂ
ಕೊಡಬೇಡ
ಕೇವಲ
ಪ್ರೀತಿಯ
ಹೊರತು
*
ಪ್ರೀತಿ
ಸುಲಭವೂ ಅಲ್ಲ
ಕಷ್ಟವೂ ಅಲ್ಲ
ಅದು ಹಗ್ಗದ
ಮೇಲಿನ ನಡಿಗೆ
*
ನಿಜ ಹೇಳ್ತೀನಿ
ನಾನು ಬಡವನಾಗಲು
ನಿನ್ನ ಬ್ಯೂಟಿಯೇ ಕಾರಣ
ನಿನಗೆ
ಕಾಸ್ಮೆಟಿಕ್ಸ್ ಕೊಡಿಸಲಿಲ್ಲ ಅಂದ್ರೆ
ಬೆಂಗಳೂರಲ್ಲೊಂದು
ಸೈಟ್ ಮಾಡ್ತಿದ್ದೆ
*
ಮೊನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ನಿನ್ನೆ ಕೇಳಬೇಕು ಅಂತಿದ್ದೆ
ಆಗಲಿಲ್ಲ
ಇವತ್ತು ಕೇಳ್ತಿದೀನಿ ಕಣೋ
ನನ್ನ ಮರೆತು ಬಿಡು
ನನಗೆ ಪ್ರೀತಿಯೆಂದರೆ
ಕೇವಲ ಶೋಕಿಯಲ್ಲ
*
ಕೆಲವರು
ಬದುಕು
ಬಿಸಾಕಿ ಎದ್ದು ಹೋಗಿದ್ದು
ಬಾಳಲಿಕ್ಕಾಗಲ್ಲ ಅಂತಲ್ಲ
ನಾವೇ
ಬಿಡಲಿಲ್ಲ ಅಂತ

10 comments:

Anonymous said...

ಆತ್ಮೀಯ
ನಿಮ್ಮ ಚಿಕ್ಕ ಚೊಕ್ಕ ಕವನಗಳು ಮನಸ್ಸಿಗೆ ಮುಟ್ಟುತ್ತಿವೆ
ನಿಮಗಾಗಿ ಇನ್ನೊ೦ದಿಷ್ಟು ನಾನು ಬರೆದ ಸಾಲುಗಳು

ಇತ್ತೀಚೆಗೆ
ಉಸಿರಾಡುವಾಗ
ಉಸಿರೊಡನೆ
ನೀನು ನನ್ನಗಲಿ
ಹೋಗುವೆಯೆ೦ದು
ಉಸಿರಾಡುವುದನ್ನು
ನಿಲ್ಲಿಸಿದ್ದೇನೆ

ಬೇಡವೆ೦ದರೂ
ಅದ್ಯಾಕೋ
ಕಣ್ಣು, ನಿನ್ನ
ಕ೦ಡರೆ ಸಾಕು
ನಾಚುತ್ತದೆ

ನೀನು
ನನ್ನನ್ನು
ಬಿಟ್ಟು ಹೋದ
ಮೇಲೆ
ನಾನೂ
ನನ್ನನ್ನು
ಬಿಟ್ಟು ಹೋದೆ

ಹರೀಶ ಆತ್ರೇಯ

Basavaraj.S.Pushpakanda said...

superb sir..."oh manase "nalli odidde.matte illi odidre hosa anubhava..and please don`t stop blogging..please..please!!!!

Shravya said...

ನಿಮ್ಮ ಇನ್ ಬಾಕ್ಸ್ ಸೂಪರ್‍ ಆಗಿದೆ. ನಿಮ್ಮ ಈ ಸಾಲುಗಳನ್ನು ಓದುತ್ತಾ ಎಲ್ಲೋ ಮರೆಯಾಗಿದ್ದ ನನ್ನ ನಗು ಮುಖದ ಮೇಲೆ ಮೂಡಿತು. ಧನ್ಯವಾದ ರವಿ.

ದಿನಕರ ಮೊಗೇರ said...

ತುಂಬಾ ಜನ
ಪ್ರಪೋಸ್ ಮಾಡಿದ್ರು
ನಂಗೆ ಇಷ್ಟ ಇಲ್ಲ ಅಂದೆ
ಈಗ
ಅವರೆಲ್ಲ
ಸುಖವಾಗಿದಾರೆ.....
ರವಿ ಸರ್.....
ತುಂಬಾ ಚೆನ್ನಾಗಿದೆ ಎಲ್ಲಾ ಹನಿಗಳು..... ಓ ಮನಸೇ ನಲ್ಲಿ ಬರೆದ ಎಲ್ಲಾ ಹನಿ, ಕವನ ಕತೆಗಳನು ಓದಿದ್ದೇನೆ.... ತುಂಬಾ ಚೆನ್ನಾಗಿದ್ದವು..........

Santhosh Rao said...

Nice one Ravi... :)

ಚಂದಿನ | Chandrashekar said...

ರವಿ ಅವರೆ,

ಕೆನೆ ಕಾಫಿಯಷ್ಟೇ ಬಿಸಿಬಿಸಿಯಾಗಿ, ಹದವಾದ ರುಚಿಯೊಂದಿಗೆ ಸೆಳೆಯುವ ಸಾಲುಗಳು...

ಸಾಗರದಾಚೆಯ ಇಂಚರ said...

ರವಿ ಸರ್
ತುಂಬಾ ಸೊಗಸಾಗಿದೆ ಎಲ್ಲ ಚುಟುಕುಗಳು
ಚಿಂತನೆಗೆ ಹಚ್ಚುತ್ತ ನಗೆಯ ಕಚಗುಳಿ ಇಡುತ್ತವೆ

ಡಿ.ಎಸ್.ರಾಮಸ್ವಾಮಿ said...

ತುಂಬ ದಿನಗಳ ಮೇಲೆ ಎದೆಗಿಳಿಯುವ ಸಾಲುಗಳನ್ನು ಓದಿದೆ. ಥ್ಯಾಂಕ್ಸ್. ಏಕೋ ಪದ್ಯ ಬರೆಯುವವರೆಲ್ಲ ಪ್ರೀತಿ, ಮುನಿಸು ಥರದ ನವಿರು ಭಾವನೆ ಕಳಕೊಂಡು ಹುಸಿ ಅಧ್ಯಾತ್ಮದಲ್ಲೆಲ್ಲೋ ಲೀನ ವಾಗಿರುವಾಗ ನಿಮ್ಮ ಕಿರುಗವಿತೆಗಳು ಮುದಕೊಟ್ಟವು.

Siddu said...

mast ittu , ravi sir.

RAJEEV V KRISHNA said...

nimma "INBOx" andre nange thumba ista sir...