Sunday, October 24, 2010

ಅದಕ್ಕಿಂತ ಅಮಾನವೀಯತೆ ಇನ್ನೊಂದಿದೆಯೇ?


ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ಕಾಡೆಮ್ಮೆಯೊಂದು ಕೆಸರಿನಲ್ಲಿ ಹೂತು ಹೋಗಿ ಕೇವಲ ತಲೆ ಮಾತ್ರ ಮೇಲಿರುತ್ತದೆ. ಕೆಸರಿನಿಂದ ಬಚಾವ್ ಆಗಿ ಬದುಕುವ ಎಲ್ಲಾ ಆಸೆಗಳೂ ಅದರ ಪಾಲಿಗೆ ಕಮರಿಹೋಗಿರುತ್ತದೆ. ಅದು ಅಂಥ ಡೆಡ್ಲಿ ಕೆಸರು.ಇದನ್ನ ಕ್ಯಾಮೆರಾ ಸೆರೆಹಿಡಿಯುತ್ತಲೇ ಇರುತ್ತದೆ. ಅದೇ ಸಮಯಕ್ಕೆ ಮೂರ್ನಾಲ್ಕು ಸಿಂಹದ ಮರಿಗಳು ಒಣಗಿದ ಕೆಸರಿನ ಮೇಲೆ ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ಬಂದು ಕಾಡೆಮ್ಮೆಯ ಮೂತಿಗೆ ಬಾಯಿ ಹಾಕಿ ತಿನ್ನೋದಕ್ಕೆ ಶುರು ಮಾಡುತ್ತವೆ. ಕಾಡೆಮ್ಮೆ ಸಣ್ಣದೊಂದು ಚೀತ್ಕಾರ ಮಾಡಲೂ ಆಗದೆ ಸತ್ತುಹೋಗುತ್ತದೆ. ಸಾವು ಕೆಮೆರಾದಲ್ಲಿ ದಾಖಲಾಗುತ್ತದೆ.
***
ಕೆವಿನ್ ಕಾರ್ಟರ್ ಅನ್ನೋ ಒಬ್ಬ ಹೆಸರಾಂತ ಫೋಟೋ ಜರ್ನಲಿಸ್ಟ್ ಇದ್ದ. ಜೊಹಾನಸ್ ಬರ್ಗ್ ಅವನ ಊರು. ಕೆವಿನ್ ಹೆಸರು ನೀವೂ ಕೇಳಿರಬಹುದು. ಯಾಕೆಂದ್ರೆ ಅವನ ಬದುಕು ಬಲಿಯಾಗಿದ್ದು ಕೇವಲ ಒಂದು ಫೋಟೋಗಾಗಿ. 1994 ರಲ್ಲಿ ಸೂಡಾನಿಗೆ ಹೋದ ಕೆವಿನ್ ಅಲ್ಲಿನ ಬಡತನದ ಬೇಗೆಯನ್ನ ಸೆರೆಹಿಡಿಯುತ್ತಲೇ ಅದ್ಭುತ(?)ವಾದ್ದೊಂದು ಫೋಟೋ ತೆಗೆದುಬಿಡುತ್ತಾನೆ. ಆ ಫೋಟೋ ಅವನಿಗೆ ಪುಲಿಟ್ಜರ್ ಬಹುಮಾನವನ್ನೂ ತಂದುಕೊಡುತ್ತದೆ. ದುರಂತ ಅಂದ್ರೆ ಅದೇ ಫೋಟೊ ಅವನ ಸಾವಿಗೂ ಕಾರಣವಾಗಿಹೋಗುತ್ತದೆ.
ಹಸಿವಿನಿಂದ ಬಳಲಿದ ಮಗುವೊಂದು ಸಾಯುವ ಸ್ಥಿತಿಯಲ್ಲಿ ಕುಳಿತಿರುತ್ತದೆ. ಅದರ ಹಿಂದೇನೆ ಆ ಮಗುವಿನ ಸಾವಿಗಾಗಿ ರಣ ಹದ್ದೊಂದು ಕಾಯುತ್ತಾ ಕುಳಿತಿರುತ್ತದೆ. ಈ ಫೋಟೋ ತೆಗೆದ ಕೆವಿನ್ ಆ ಕ್ಷಣಕ್ಕೆ ಥ್ರಿಲ್ ಆಗಿ ಹೋಗಿದ್ದ. ಯಾಕೆಂದ್ರೆ ಅಂಥ ಕರುಣಾಜನಕವಾದ ಫೋಟೋವನ್ನ ಅದುವರೆಗೂ ಯಾರೂ ತೆಗೆದಿರಲಿಲ್ಲ. ತೆಗೆಯೋದಕ್ಕೂ ಅಂಥ ಸಂದರ್ಭ ಸಿಗಬೇಕಲ್ಲ. ಹಾಗಾಗಿ ಗ್ರೇಟ್ ಫೋಟೋ ಅಂತ ಪರಿಗಣಿಸಿ ಕೆವಿನ್ ಗೆ ಪುಲಿಟ್ಜರ್ ಪ್ರಶಸ್ತಿಯೂ ಬಂತು.
ಪ್ರಶಸ್ತಿ ಪಡೆದ ಕೆವಿನ್ನನ ಖುಷಿ ಅವನ ಕಾಲ ಬುಡದಲ್ಲೆ ಸತ್ತುಬಿದ್ದಿತ್ತು. ಕೆವಿನ್ನನನ್ನ ನಿಲ್ಲಿಸಿ, ಅಲ್ಲಯ್ಯ ನೀನು 20 ನಿಮಿಷ ಕೂತು ಅಡ್ಜೆಸ್ಟ್ ಮಾಡಿ ನಿನಗೆ ಬೇಕಾದ ಥರ ಆ ಫೋಟೋ ತೆಗೆದೆಯಲ್ಲ. ಅಷ್ಟು ನಿಮಿಷದಲ್ಲಿ ಆ ಮಗುವಿಗೊಂದು ಬ್ರೆಡ್ ಪೀಸ್ ಕೊಡೋದಕ್ಕೆ ಆಗಲಿಲ್ಲವಾ... ಕೈ ಹಿಡಿದು ಎತ್ತಿ ಸಾಂತ್ವನ ಮಾಡೋದಕ್ಕೆ ಆಗಲಿಲ್ಲವಾ... ಹಚಾ ಹಚಾ ಅಂತ ರಣಹದ್ದನ್ನು ಓಡಿಸಿ ಮಗುವನ್ನ ಬದುಕಿಸೋದಕ್ಕೆ ಆಗಲಿಲ್ಲವಾ? ದೊಡ್ಡ ಈಡಿಯಟ್ ನೀನು. ನಿನಗೆ ಬೇಕಾದ ಫೋಟೋ ಆ ಮಗುವಿನ ಪ್ರಾಣಕ್ಕಿಂತ ದೊಡ್ಡದಾಗಿಹೋಯ್ತಾ ಅಂತ ಯಾರು ಕೇಳಿದರೋ ಗೊತ್ತಿಲ್ಲ. ಪ್ರಶ್ನೆ ಕೇಳಿ ಕೆವಿನ್ ವಿಲವಿಲನೆ ಒದ್ದಾಡಿಹೋಗಿದ್ದ. ಮನಸ್ಸು ಹೌದಲ್ಲವಾ ಅಂತ ಪರಿತಪಿಸಿಬಿಟ್ಟಿತ್ತು. ತಪ್ಪು ಮಾಡಿಬಿಟ್ಟೆ ಅಂತೆನಿಸಿ ಒಳಗೊಳಗೆ ಕೊರಗಿದ್ದ ಕೆವಿನ್. ಮಾಡಿದ ತಪ್ಪು ಮನಸ್ಸನ್ನು ಕ್ಷಣಕ್ಷಣವೂ ಕಿತ್ತು ತಿನ್ನುತ್ತಿತ್ತು. ಆ ಶಾಕ್ನಿಂದ ಹೊರಬರಲಾರದೆ ಕೆವಿನ್ ಮೂರು ತಿಂಗಳಲ್ಲಿ ಮಾನಸಿಕವಾಗಿ ಬಳಲಿ ಬಳಲಿ ಸತ್ತು ಹೋದ.
ಯಾರೂ ಕೊಡದಿದ್ದನ್ನ ನಾನು ಜಗತ್ತಿಗೆ ಮೊದಲು ಕೊಡಬೇಕು....ಮೊದಲು ತೋರಿಸಬೇಕು...ನನ್ನ ಹೆಸರು ರಾರಾಜಿಸಬೇಕು ಅನ್ನೋ ಪತ್ರಕರ್ತರ ಹಪಾಹಪಿಗೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಅನ್ನೋದ್ರ ಅರಿವೂ ಇಲ್ಲದಂತೆ ಕೆಲವೊಮ್ಮೆ ಪತ್ರಕರ್ತ ಬ್ಲೈಂಡ್ ಆಗಿ ಕೆಲಸ ಮಾಡಿಬಿಟ್ಟಿರುತ್ತಾನೆ. ಹೆಸರು ಮಾಡಬೇಕೆನ್ನುವ ಪತ್ರಕರ್ತನ ಹಪಾಹಪಿ ಒಂದು ಜೀವದ ಬೆಲೆಯನ್ನ ಒಂದು ಪೋಟೋದ ಬೆಲೆಗೆ ತಂದು ನಿಲ್ಲಿಸಿಬಿಡುತ್ತದೆ? ಕೆವಿನ್ ಫೋಟೋ ತೆಗೆದುಕೊಂಡು ಬಂದ... ಅಲ್ಲಿ ಮಗು ಬದುಕ್ತಾ... ರಣ ಹದ್ದಿಗೆ ಆಹಾರವಾಗಿಹೋಯ್ತಾ? ಅವನಿಗೇನಾಗಬೇಕಿದೆ. ಇಲ್ಲಿ ಅದೇ ಮಗುವಿನ ಹಸಿವಿನ ನರಳಿಕೆಯ ಮೇಲೆ ಹೊಗಳಿಕೆಯ ಸೌಧ ಕಟ್ಟುತ್ತಿರುತ್ತಾರಲ್ಲ. ಸಾಕವನಿಗೆ.
***
ಕಲಹರಿ ಮರುಭೂಮಿಯಲ್ಲಿ ಮೀರ್ ಕ್ಯಾಟ್ ಅನ್ನೋ ಚುರುಕಾದ ಅಪರೂಪದ ಪುಟ್ಟ ಪ್ರಾಣಿಗಳಿವೆ.ಅವು ರಸ್ತೆ ದಾಟಬೇಕಾದರೆ ಕ್ಷಣ ನಿಂತು ಅತ್ತ ಇತ್ತ ನೋಡಿ ಯಾವುದೇ ವೆಹಿಕಲ್ ಬರ್ತಾ ಇಲ್ಲ ಅಂದಾಗ ಮಾತ್ರ ರಸ್ತೆ ದಾಟುವುದಕ್ಕೆ ಮುಂದಾಗುತ್ತವೆ. ಅದು ಅವುಗಳ ಬುದ್ಧಿವಂತಿಕೆಗೆ ಹಿಡಿದ ಕನ್ನಡಿ. ಆದ್ರೆ ಎಲ್ಲಾ ಸಲ ಅವುಗಳ ಲೆಕ್ಕಾಚಾರ ಸರಿ ಇರುವುದಿಲ್ಲ. ಮನುಷ್ಯರಾದ ನಮ್ಮದೇ ಗೆಸ್ ಎಷ್ಟೋ ಸಲ ಹಳ್ಳ ಹಿಡಿದಿರುತ್ತೆ ಅಂದ ಮೇಲೆ ಪಾಪ ಪ್ರಾಣಿಗಳ ಲೆಕ್ಕಾಚಾರ ಹೇಗೆ ಸರಿ ಇರಲು ಸಾಧ್ಯ. ಮೀರ್ ಕ್ಯಾಟ್ ಒಂದು ರಸ್ತೆ ಮಧ್ಯದಲ್ಲಿ ಹಾಗೆ ಲೆಕ್ಕಾಚಾರದಲ್ಲಿ ನಿಂತಿದ್ದಾಗಲೇ ಟ್ರಕ್ ಒಂದು ಹೊಡೆದು ದಾರುಣವಾಗಿ ಸತ್ತುಹೋಗುವುದನ್ನ ತೋರಿಸಿ ನೋಡಿ ಅವುಗಳ ಲೆಕ್ಕಾ ಚಾರ ಹೇಗೆ ತಪ್ಪಾಗಿ ಹೋಯ್ತು ಅನ್ನುತ್ತಾನೆ ಡಾಕ್ಯುಮೆಂಟರಿ ಮಾಡಿದಾತ. ಟ್ರಕ್ ಕೆಳಗಿನಿಂದ ಕೆಮೆರಾ ಇಟ್ಟು ಅದು ಸಾಯುವುದನ್ನ ಚಿತ್ರೀಕರಿಸಿದವನಿಗೆ ಪುಟ್ಟ ಮೀರ್ ಕ್ಯಾಟ್ ನ್ನ ಬಚಾವ್ ಮಾಡಲು ಆಗಲಿಲ್ಲವೇ? ಜಸ್ಟ್ ಥಿಂಕ್.
***
ಪ್ರಪಂಚದ ಇನ್ನೊಂದು ಮುಖ ಹೇಗೆಲ್ಲ ಇದೆ ಅನ್ನೋದನ್ನ ಒಂದೊಂದು ಮೂಲೆಯಿಂದಲೂ ಹೆಕ್ಕಿ ತಂದು ಇನ್ನೊಂದು ಮೂಲೆಗೆ ತಿಳಿಯಪಡಿಸುವ ಜವಾಬ್ದಾರಿ ಖಂಡಿತಾ ಪತ್ರಕರ್ತರ ಮೇಲಿದೆ. ಆದ್ರೆ ಆ ತರಾತುರಿಯಲ್ಲಿ ಮಾನವೀಯತೆಯನ್ನ ಕಳೆದುಕೊಳ್ಳಬಾರದು. ಸತ್ತುಹೋದ ಮಗುವಿನ ದಃಖದಲ್ಲಿರುವ ತಾಯಿಯನ್ನ ನಿಮ್ಮ ಮಗ ಸತ್ತುಹೋದ ಹೇಗನಿಸ್ತಾ ಇದೆ ಅಂತ ಕೇಳಿದ್ರೆ ಅದಕ್ಕಿಂತ ಅಮಾನವೀಯವಾದ್ದು ಇನ್ನೊಂದಿದೆಯಾ? ಐ ಡೋಂಟ್ ನೋ.
ಒಂದು ಜೀವವನ್ನ ಬದುಕಿಸುವ ಸಾಧ್ಯತೆಯಿದ್ದಾಗ ಯಾರೇ ಆಗಲಿ ಮೊದಲು ಅದಕ್ಕೆ ಪ್ರಾಧಾನ್ಯತೆ ಕೊಡಬೇಕು. ಉಳಿದಿದ್ದು ನೆಕ್ಸ್ಟ್.
ಏನಂತೀರಿ?

Thursday, October 7, 2010

ಹೇಗೆ ಮರೆಯೋದು ಹೇಳು ಬದುಕಿಗೆ ಕೊಳ್ಳಿ ಇಟ್ಟವನನ್ನ

ಇಷ್ಟಕ್ಕೂ ಪ್ರೀತಿ ಸೋತು ಹೋಗುವುದು ಯಾವಾಗ?
ಯಾವ ಪ್ರಿತಿಯನ್ನ.. ಯಾರ ಪ್ರೀತಿಯನ್ನ ಎದೆಗಪ್ಪಿಕೊಂಡು... ಕೈ ಕೈ ಹಿಡಿದುಕೊಂಡು ತಿರುಗಾಡುತ್ತೇವೆಯೋ ಅದೇ ಪ್ರೀತಿ ಒಂದೊಂದ್ಸಲ ಥತ್ ತೇರಿಕೆ ಅನ್ನಿಸಿಬಿಡುತ್ತದೆ. ಇಷ್ಟೇನಾ ಈ ಪ್ರೀತಿಯ ಅರ್ಥ ಅನಿಸಿಬಿಡುತ್ತದೆ. ಹಾಗಂತ ಪ್ರೀತಿ ಸೋತಿತು ಅಂತಲ್ಲ. ಕೆಲವು ಸಲ ನಾವೇ ಪ್ರಿತಿಗೆ ಅರ್ಹರಾಗಿರೋಲ್ಲ ಅಷ್ಟೆ.
ಹೇಳಬೇಕೆಂದೆರೆ, ನಾನು ನೀನು ಜನ್ಮ ಇರೋ ತನಕ ಪ್ರೀತಿಸೋಣ ಅನ್ನೋದು ಆ ಕ್ಷಣದ ಭಾವುಕತೆಯಾಗಿರುತ್ತದೆ.ಇಂಥ ಮಾತುಗಳು ಕೆಲವೊಮ್ಮೆ ಇಷ್ಟಪಟ್ಟವರನ್ನ ಒಲಿಸಿಕೊಳ್ಳಲು ಒಂದು ಅಸ್ತ್ರವಾಗಬಹುದು. ಇದು ಪ್ರೀತಿಯಲ್ಲ... ಯಾವಾಗ ಪ್ರ್ರೀತಿ ನಾಟಕವಾಗುತ್ತದೋ... ಒಂದು ಅಸ್ತ್ರವಾಗುತ್ತದೋ ಅಲ್ಲಿ ಪ್ರೀತಿಗೆ ಬೆಲೆ ಇರೋದಿಲ್ಲ. ಆಡಿದ ನಾಟಕಕ್ಕೆ ಅರ್ಥ ಇರೋದಿಲ್ಲ.
ಇತ್ತೀಚೆಗೆ ನನಗೊಂದು ಹುಡುಗಿ ಪೋನ್ ಮಾಡಿದ್ದಳು. ಹೆಸರು ಲಕ್ಷ್ಮೀ. ಆಕೆ ಹುಡುಗನೊಬ್ಬನನ್ನು ಇಷ್ಟ ಪಟ್ಟು ಪ್ರೀತಿಸುತ್ತಿದ್ದಳಂತೆ. ಪ್ರೀತಿ ಒಂದು ಹಂತಕ್ಕೆ ಬಂದಾಗ ಮನೆಯವರನ್ನೆಲ್ಲ ದಿಕ್ಕರಿಸಿ ಮದುವೆ ಆಗಿದ್ದರು. ಇಷ್ಟು ಸಾಕು ನಮ್ಮ ಪ್ರೀತಿ ಗೆದ್ದಿತು ಅಂತ ಬೆಂಗಳೂರಿಗೆ ಬಂದು ಸಂಸಾರ ಹೂಡುವಷ್ಟರಲಿ ಪ್ರೀತಿಗೆ ಹುಳು ಬಿದ್ದಿತ್ತು. ಬದುಕಿನ ರಿಯಾಲಿಟಿ ಎದ್ದು ಕುಳಿತಿತ್ತು. ಪರಸ್ಫರ ಈಗೊ ಇಬ್ಬರ ಕಣ್ಣಲ್ಲಿ ಕುಣಿಯುತ್ತಿತ್ತು. ನಾವಿಬ್ರೂ ತುಂಬಾನೆ ಪ್ರೀತಿಸುತ್ತಿದ್ವಿ. ಎರಡು ಕುಟುಂಬವನ್ನ ಎದುರುಹಾಕಿಕೊಂಡು ಹೊರಗೆ ಬಂದು ಮದುವೆ ಕೂಡ ಆದ್ವಿ. ಇನ್ನೂ ಒಂದು ವರ್ಷ ತುಂಬಿಲ್ಲ. ಆಗಲೇ ಈಗ ಅದರ ಕಷ್ಟ ಗೊತ್ತಾಗ್ತಿದೆ. ನನ್ನ ಪತಿ ಅನಿಸಿಕೊಂಡ ಭೂಪ ಕೆಲಸ ಬಿಟ್ಟು ಮನೇಲಿ ಕುಳಿತಿದ್ದಾನೆ. ಅವನಿಗೆ ವಿಪರೀತ ಇನ್ಫೀರಿಯಾರಿಟಿ. ಡೌಟು. ಯಾರೊ ನಿನ್ನನ್ನ ಹಿಂಬಾಲಿಸ್ತಿದಾನೆ ಅಂತ ನನ್ನ ಕೈಲಿದ್ದ ಕೆಲಸವನ್ನೂ ಬಿಡಿಸಿಬಿಟ್ಟ.ಇಬ್ಬರೂ ಮನೆಯಲ್ಲಿ ಕುಳಿತಿದ್ದೇವೆ. ನನ್ನ ಮಾತನ್ನ ಅವನು ಕೇಳುತ್ತಿಲ್ಲ... ಅವನ ಮಾತನ್ನೂ ನಾನು ಕೇಳುತ್ತಿಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಬದುಕು ಇಲ್ಲಿಗೆ ಸಾಕು ಅನಿಸಿಬಿಟ್ಟಿದೆ. ಈ ಕೆಟ್ಟ ಪ್ರೀತೀನ ನಂಬಿಕೊಂಡು ನನ್ನೆಲ್ಲ ಸಂಬಂಧಗಳನ್ನ ಕಳೆದುಕೊಂಡು ಬಿಟ್ಟೆ ಅಂತ ಕಣ್ಣೀರಾದಳು ಲಕ್ಷ್ಮಿ.
ಇಂಥ ಸೋತ ಪ್ರೀತಿಗಳೆಷ್ಟೋ.... ಒಡೆದು ಹೋದ ಮನಸುಗಳೆಷ್ಟೋ... ಹಾಗಂತ ಪ್ರೀತಿಸುವುದು ನಿಂತುಹೋಯ್ತಾ? ನೋ. ಆದ್ರೆ ಜನ ಯಾಕೋ ಪ್ರೀತಿಯನ್ನ ನಂಬಿಕೊಂಡಷ್ಟು ಸಂಖ್ಯೆಯಲ್ಲಿ ಬದುಕಿನ ಸತ್ಯವನ್ನ ನಂಬಿಕೊಳ್ಳುವುದಿಲ್ಲ. ಹಸಿವು ಪ್ರೀತಿಗಿಂತ ದೊಡ್ಡದಾಗಿ ಕಂಡಾಗ ಪ್ರೀತಿ ಸತ್ತು ಹೋಗುತ್ತದೆ. ಅವಮಾನಗಳು ಹೆಡೆ ಎತ್ತುತ್ತವೆ. ನಂಬಿಕೆ ಗೋತಾ ಹೊಡೆಯುತ್ತದೆ. ಅವನು ಕೆಲಸಕ್ಕೆ ಹೋಗುತ್ತಿಲ್ಲ... ಇವಳನ್ನೂ ಅನುಮಾನದಿಂದ ಬಿಡಿಸಿದ. ಹೊಟ್ಟೆಗೇನು ತಣ್ಣೀರು ಬಟ್ಟೆ ಹಾಕಿಕೊಂಡು ಇರಲಿಕ್ಕಾಗುತ್ತದಾ? ನಿಜ್ಜ ಹೇಳ್ತೀನಿ, ಹಸಿವಿನ ಗರ್ಭದಲ್ಲಿ ಪ್ರೀತಿ ಹುಟ್ಟಲಾರದು. ಆದ್ರೆ ಇಂತ ಮನೆಬಿಟ್ಟು ಓಡಿ ಬರುವ ಪ್ರೇಮಿಗಳಿಗೆ ಬದುಕಿನ ಕಟು ಸತ್ಯ ಗೊತ್ತಾಗುವುದು ಯಾವಾಗ?
ಇಲ್ಲಿ ಗಮನಿಸಬೇಕಾದ್ದು ಪ್ರೀತಿಸುತ್ತೇವೆ ಅಂತ ಹೊರಟವರ ಜಿದ್ದು. ಪ್ರೀತಿ ಸಿಕ್ತಲ್ಲ ಇನ್ನೆಲ್ಲ ಸಿಕ್ಕಿತು ಬಿಡು ಅಂತ ಅಂದುಕೊಂಡುಬಿಡುವ ಮೂರ್ಖತನ. ಯಾವ ಪ್ರೀತಿಯೂ ಹಸಿವಿಗೆ ಮದ್ದಲ್ಲ ಅನ್ನುವುದು ಗೊತ್ತಿದ್ದರೆ ಚೆನ್ನ. ಬದುಕಿನ ರಿಯಾಲಿಟಿ ಅರಿತುಕೊಳ್ಳದ ಹೊರತು ಎಷ್ಟೇ ಪ್ರೀತಿ ಇದ್ದರೂ ವೇಸ್ಟ್.
ನನ್ನ ಗೆಳೆಯನೊಬ್ಬನಿದ್ದ ಜಗ್ಗಿ ಅಂತ. ಊರಿನಲ್ಲಿ ಆತ ಲೇಡಿಸ್ ಟೈಲರ್. ಪಕ್ಕಾ ಹುಂಬ ಮನಸ್ಸಿನವ. ಪ್ರೀತಿ ಮಾಡೊದು ಅವನಿಗೊಂದು ಖಯಾಲಿ. ಬಟ್ಟೆ ಹೊಲಿಸಿಕೊಳ್ಳಲು ಬರುವ ಬಹುತೇಕ ಹುಡುಗೀರ ಜೊತೆ ಅವರಿಗೆ ಇಷ್ಟವಾಗುವ ಹಾಗೆ ಮಾತಾಡುತ್ತಿದ್ದ. ಜೋಕ್ ಮಾಡುತ್ತಿದ್ದ. ನಗಿಸುತ್ತಿದ್ದ. ಕೀಟಲೇ ಮಾಡುತ್ತಿದ್ದ. ಕೆಲವು ಚೆಲುವೆಯರಿಗೆ ಜಗ್ಗಿ ಪಕ್ಕನೆ ಇಷ್ಟ ಕೂಡ ಆಗಿಬಿಡುತ್ತಿದ್ದ. ನಾವೆಲ್ಲ ಅವನ ಹೀರೋಯಿಸಂ ನೋಡಿ ಬೆಕ್ಕಸ ಬೆರಗಾಗುತ್ತಿದ್ದೆವು. ಹುಡುಗೀರ ಮುಂದೆ ಅಷ್ಟೆಲ್ಲ ಶಾಣ್ಯಾತನ ತೋರಿಸಿ ಅವರನ್ನ ಬುಟ್ಟಿಗೆ ಹಾಕಿಕೊಳ್ಳುವ ಅವನ ಕಲೆ ನಮಗೆ ಮಿರಾಕಲ್ ಥರ ಕಾಣಿಸುತ್ತಿತ್ತು. ಅವನಿಗೋ ಊರ ತುಂಬಾ ಪ್ರೇಯಸಿಯರಿದ್ದರು.ವಾರದಲ್ಲಿ ಒಂದೆರಡು ದಿನ ಒಬ್ಬೊಬ್ಬರ ಜೊತೆ ಹೊರಗೆಲ್ಲೋ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ನಮಗೋ ಒಳಗೊಳಗೇ ಹೊಟ್ಟೆಕಿಚ್ಚು.
ಮೇಲಿಂದ ಮೇಲೆ ಅವನ ಹುಡಗೀರ ಆಪಾದನೆಗಳು ಕೇಳಿಬಂದವು. ಅದನ್ನೆಲ್ಲ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದ ಜಗ್ಗಿ, ಒಂದ್ಸಲ ವಿಪರೀತ ಯಡವಟ್ಟು ಮಾಡಿಕೊಂಡುಬಿಟ್ಟಿದ್ದ. ಹುಡುಗಿಯೊಬ್ಬಳನ್ನು ಪ್ರೀತಿಸುವ ಅವನ ಇನ್ನೊಂದು ನಾಟಕ ಆರಂಭವಾಗಿತ್ತು. ಆ ಪ್ರೀತಿ ಕೂಡ ಹುಟ್ಟಿಕೊಂಡಿದ್ದೇ ವಿಚಿತ್ರ. ಜಗ್ಗಿಯ ಅಣ್ಣನಿಗೆ ಹೆಣ್ಣು ನೋಡಲು ಹೋದಾಗ ಆ ಮದುವೆ ಕುದುರಿರಲಿಲ್ಲ. ಆದ್ರೆ ಜಗ್ಗಿ ಹುಡುಗಿಯ ತಂಗಿಯನ್ನ ಒಲಿಸಿಕೊಂಡುಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಅವನ ಓಡಾಟ ಜೋರಾಗತೊಡಗಿತು. ಟೈಲರ್ ಅಂಗಡಿ ಬಾಗಿಲು ತೆಗೆಯುವುದೇ ಅಪರೂಪವಾಗಿತ್ತು. ಬಟ್ಟೆ ಹೊಲಿಯಲು ಕೊಟ್ಟಿದ್ದ ಮಹಿಳೆಯರು ಬೈದುಕೊಂಡು ತಿರುಗಾಡತೊಡಗಿದರು. ನಾವು ಕೂಡ ಆ ಅಡ್ಡ ಬದಲಾಯಿಸಿದೆವು.
ಹೀಗಿರುವಾಗಲೇ ಜಗ್ಗಿ ಒಂದಿನ ಎಲ್ಲಿಂದಲೋ ಫೋನ್ ಮಾಡಿದ್ದ. ನನಗೊಂದು ಹೆಲ್ಪ್ ಆಗಬೇಕು ರವೀ ಅಂತ. ಏನು ಅಂದಿದ್ದೆ. ನಾನು ಒಂದು ಹುಡುಗಿಯನ್ನ ಕರೆದುಕೊಂಡು ಬಂದುಬಿಟ್ಟಿದ್ದೇನೆ. ಏನು ಮಾಡುವುದೋ ಗೊತ್ತಾಗುತ್ತಿಲ್ಲ ಅಂದ.
ಯಾರು ಆ ಹುಡುಗಿ? ಅಂದೆ.
ಅದೇ ನಾನು ಇತ್ತೀಚೆಗೆ ಪ್ರೀತಿಸುತ್ತಿದ್ದೆನಲ್ಲ ಅದೇ ಹುಡುಗಿ ಅಂದ.
ಇನ್ನಾರಾದ್ರೂ ಹೊಸಬರು ಸಿಕ್ಕಿರಬೇಕು ಅಂದುಕೊಂಡ ನಾನು ಯಾರು ಗೊತ್ತಾಗ್ತಿಲ್ಲ ಕಣೋ ಅಂದೆ.
ಪ್ರಣತಿ ಕಣೋ ಅಂದ.
ನನಗೆ ನಿಜಕ್ಕೂ ಶಾಕ್ ಆಗಿದ್ದು ಆಗಲೇ... ಯಾಕೆಂದ್ರೆ ಆ ಹುಡುಗಿ ಸೌಮ್ಯ ಸ್ವಭಾವದವಳು. ಮರ್ಯಾದಸ್ತ ಮನೆತನದವಳು. ಅಂಥವಳು ಇವನ ಬಲೆಗೆ ಬಿದ್ದುಬಿಟ್ಟಳು ಅಂದ್ರೆ ಇವನು ಎಂಥ ಗಾಳ ಹಾಕಿರಬೇಡ...?
ಬೆಂಗಳೂರಿಗೆ ಬಂದು ಮೂರು ದಿನ ಆಯ್ತು. ಯಾರದ್ದೋ ಸಂಬಂಧಿಕರ ಮನೆಯಲ್ಲಿದ್ದೇವೆ. ಯಾಕೋ ಭಯ ಆಗ್ತ್ತಿದೆ. ಏನ್ಮಾಡ್ಲೀ ಅಂತ ಕಣ್ಣೀರಾಕಿದ್ದ.
ಇಂಥವನಿಗೆ ಏನೂ ಮಾಡಬಾರದು ಅಂತ ನನಗಾಗಲೇ ಗೊತ್ತಾಗಿಹೋಗಿತ್ತು ಹಾಗಾಗಿ ಆಯ್ತು ನೋಡೋಣ ಅಂತ ಸುಮ್ಮನಾದೆ. ವಾರ ಕಳೆಯುವಷ್ಟರಲ್ಲಿ ಆತ ನಮ್ಮ ಊರಿಗೆ ಅವಳ ಜೊತೆ ಬಂದಿದ್ದ. ಮಗಳು ಪ್ರಣತಿ ನಾಪತ್ತೆ ಆಗಿದ್ದು ಈ ಟೈಲರ್ ಜೊತೆಗೇ ಅಂತ ಗೊತ್ತಾದ ಆಕೆಯ ಮನೆಯವರು ವ್ಯಗ್ರರಾಗಿದ್ದರು. ಸಿಗಲಿ ಕತ್ತರಿಸಿ ಹಾಕುತ್ತೇವೆ ಅಂತ ಅಬ್ಬರಿಸುತ್ತಿದ್ದರು. ಕತ್ತರಿಸಿ ಹಾಕಿದ್ರೆ ಗತಿ ಏನು ಅನ್ನೋದು ನಮ್ಮೆಲ್ಲರ ಆತಂಕವೂ ಆಗಿತ್ತು.
ಪ್ರಣತಿ ಒಂದು ರಾತ್ರಿ ಮನೆ ತಲುಪಿದ್ದಳು. ಆದ್ರೆ ಅವಳನ್ನು ಬಿಟ್ಟ ಜಗ್ಗಿ ಅಬ್ಸ್ಕ್ಯಾಂಡ್. ಎಲ್ಲಿ ಹೋದ? ಆಕೆಯ ಮನೆಯವರು ಹುಡುಕತೊಡಗಿದರು. ನಾವು ಪ್ರಣತಿಯನ್ನ ಭೇಟಿ ಆಗಿ ಏನೆಲ್ಲ ನಡೀತು ಅಂತ ತಿಳಿದುಕೊಂಡೆವು. ನಿನ್ನನ್ನ ಮದುವೆ ಆಗುತ್ತೇನೆ ಅಂತ ನಂಬಿಸಿ ಜಗ್ಗಿ ಪ್ರಣತಿಯನ್ನ ಕರೆದುಕೊಂಡು ಹೋಗಿದ್ದನಂತೆ. ಹುಡುಗಿಗೆ ಸತ್ಯ ಅರ್ಥವಾಗಿತ್ತು. ನನಗೆ ಜಗ್ಗಿಯ ಜೊತೆ ಇಷ್ಟವಿಲ್ಲ ಅಂತ ಗೋಳಾಡುತ್ತಿದ್ದಳು. ಅವಳಿಗೆ ಅವನ ಇನ್ನೊಂದು ಮುಖ ಆಗಲೇ ತಿಳಿದುಹೋಗಿತ್ತು. ಆದ್ರೆ ಏನೂ ಮಾಡುವ ಹಾಗಿರಲಿಲ್ಲ. ಊರ ತುಂಬಾ ಇವರಿಬ್ಬರ ವಿಷಯವೇ ಗುಲ್ಲು ಗುಲ್ಲು.
ಪ್ರಣತಿಯಂತೂ ವಾರದಲ್ಲೇ ಸೊರಗಿಹೋಗಿದ್ದಳು. ಎರಡು ರಾತ್ರಿ ಏನೂ ತಿಂದಿರಲಿಲ್ಲವಂತೆ. ನನಗೆ ಈ ಪ್ರೀತೀನು ಬೇಡ ಏನೂ ಬೇಡ. ಊರಿಗೆ ಕರೆದುಕೊಂಡು ಹೋಗಿ ಬಿಟ್ಟುಬಿಡು ಅಂತ ಹಟ ಹಿಡಿದಿದ್ದಳಂತೆ. ಆದ್ರೆ ಜಗ್ಗಿ ಅಷ್ಟು ಸುಲಭವಾಗಿ ಬಿಡುವವನಲ್ಲ.
ಒಂದಿನ ಜಗ್ಗಿ ಊರಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ. ಮೊದಲೇ ಹೇಳಿದಂಗೆ ಹುಂಬು ಧೈರ್ಯ ಅವನದ್ದು. ಪ್ರಣತಿಯ ಮನೆಯವರು ಜಗ್ಗಿಯನ್ನ ಹಿಡಿದು ಯಾವ ಪರಿ ತದುಕಿದ್ದರೆಂದ್ರೆ ಕೊಂದೇ ಹಾಕಿಬಿಡುತ್ತಾರೆನೋ ಅಂತ ನಾವೆಲ್ಲ ಗಾಬರಿ ಆಗಿದ್ದೆವು. ಇಬ್ಬರನ್ನೂ ಕೂರಿಸಿಕೊಂಡು ಮದುವೆ ಆಗ್ತಿರಾ ಅಂತ ಕೇಳಿದ್ರೆ ಪ್ರಣತಿ ಬಿಲ್ಕುಲ್ ನಾನು ಮದುವೆ ಆಗೊಲ್ಲ ಅಂದುಬಿಟ್ಟಿದ್ದಳು. ಜಗ್ಗಿಗೂ ಅವಳು ಬೇಕಾಗಿರಲಿಲ್ಲ. ಇವಳಿಲ್ಲದಿದ್ರೆ ಇನೊಬ್ಬಳು ಅನ್ನುವ ಆಸಾಮಿ ಆತ. ಪ್ರಣತಿ ಹೋದರೇನು ...?
ಆ ಕೇಸ್ ಅಲ್ಲಿಗೆ ಹೇಗೋ ಸ್ತಭ್ದವಾಯಿತು.
ಇದಾದ ಮೇಲೆ ಒಂದೆರಡು ತಿಂಗಳು ಸರಿಯಾಗಿ ಬಾಗಿಲು ತೆಗೆದ ಜಗ್ಗಿ. ಆದ್ರೆ ನಾಯಿ ಬಾಲ ನೆಟ್ಟಗಾದೀತೆ. ಮತ್ತೆ ಅವನ ಬೇಟೆ ಶುರುವಾಗಿತ್ತು. ಪ್ರಣತಿಯನ್ನ ಅವಳ ಮನೆಯವರು ತರಾತುರಿಯಲ್ಲಿ ಮದುವೆ ಮಾಡಿ ಬೆಂಗಳೂರಿಗೆ ಹುಡುಗನ ಮನೆಗೆ ಕಳುಹಿಸಿಕೊಟ್ಟುಬಿಟ್ಟಿದ್ದರು. ಅವಳು ಒಮ್ಮೆ ಊರಿಗೆ ಬಂದಾಗ ನನಗೆ ಸಿಕ್ಕಿದ್ದಳು. ಎಲ್ಲೋ ಜಗ್ಗಿ ಅಂದಿದ್ದಳು. ನೀನು ಅವನನ್ನ ಇನ್ನೂ ಮರೆತಿಲ್ವಾ... ಅಂದೆ. ಬದುಕಿಗೆ ಕೊಳ್ಳಿ ಇಟ್ಟವನನ್ನ ಹೇಗೋ ಮರೆಯೋದು ಅಂದಿದ್ದಳು.
ಹೇಗಿದೆ ಹೊಸ ಜೀವನ ಅಂದೆ. ನಿನ್ನ ಗೆಳೆಯನ ಪ್ರೀತಿ ನಂಬಿಕೊಂಡಿದ್ರೆ ನಾನು ಹಸಿವಿನಿಂದ... ಕೀಳರಿಮೆಯಿಂದ.. ದುಃಖದಿಂದ ಸತ್ತು ಹೋಗ್ತಿದ್ದೆ ಕಣೋ. ದೇವರು ಡೊಡ್ಡವನು. ಆದ್ರೆ ಆ ನೋವಿನ್ನೂ ಎದೆಯಲ್ಲಿ ಜೀಕುತ್ತಿದೆ. ಅದನ್ನ ಸಮಾಧಿ ಮಾಡಲುಪ್ರಯತ್ನಿಸುತ್ತಿದ್ದೇನೆ ಅಂದಿದ್ದಳು. ಕಣ್ಣು ಒದ್ದೆ ಒದ್ದೆ.
***
ಯಾಕೋ ಲಕ್ಷ್ಮಿಯಂಥವರ ಫೋನ್ ಕರೆಗಳು ಬಂದಾಗಲೆಲ್ಲ ಪ್ರೀತಿಯ ಇನ್ನೊಂದು ಮುಖ ಕೈ ಹಿಡಿದು ಜಗ್ಗಿದಂತಾಗುತ್ತದೆ.
ಟೇಕ್ ಕೇರ್.

Sunday, January 3, 2010

ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ



ಗೆಳೆಯ ಮಣಿಕಾಂತ್ ಮತ್ತು ನನ್ನದು ಆರೇಳು ವರ್ಷಗಳ ಗಟ್ಟಿ ಸ್ನೇಹ. ನಾನು ವಿಜಯಕನರ್ಾಟಕದ ಹೊಸ್ತಿಲು ತುಳಿಯುವ ಹೊತ್ತಿಗಾಗಲೇ ಅವರು ಅಲ್ಲಿ ಸ್ಥಾಪಿತರಾಗಿಬಿಟ್ಟಿದ್ದರು. ತುಂಬಾ ಆತ್ಮೀಯ. ಸ್ನೇಹಿತರ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ಯಾವಾಗ ಸಿಕ್ಕರೂ ಗಂಟೆಗಟ್ಟಲೇ ಕುಳಿತು ಹರಟುತ್ತೇವೆ. ಬನ್ನಿ ರವಿ ನಿಮಗೆ ಗಣೇಶ್ ಸ್ವೀಟ್ಸ್ನಲ್ಲಿ ಮೈಸೂರ್ ಪಾಕ್ ಕೊಡಸ್ತೀನಿ ಅಂತ ಕರ್ಕೊಂಡು ಹೋಗಿ ಅವಾಗವಾಗ ಮೈಸೂರ್ ಪಾಕ್ ತಿನ್ನಿಸ್ತಿರ್ತಾರೆ. ಹಾಗಾಗೆ ನಾನು ದಪ್ಪ ಅಂತ ಏನಾದರೂ ಆಗಿದ್ದರೆ ಅದರ ಹಿಂದೆ ಮಣಿಯ ಕೈವಾಡವೂ ಇದೆ ಅನ್ನುವ ಗುಮಾನಿ ನನಗೆ. ಒಮ್ಮೊಮ್ಮೆ ಅಂತೂ ನಿಮ್ಮನ್ನು ನೋಡಬೇಕು ಎಲ್ಲಿ ಸಿಕ್ತೀರಾ ಅಂತ ಮೆಸೇಜ್ ಬಿಟ್ಟು ತುದಿಗಾಲಲ್ಲಿ ನಿಂತಿರ್ತಾರೆ. ಪ್ರತಿ ಸಲ ಸಿಕ್ಕಾಗಲೂ ಅದೇ ಪ್ರಿತಿ ಅದೇ ರೀತಿ.
ಇಂಥ 'ಮಣಿಯ ಹಾಡು ಹುಟ್ಟಿದ ಸಮಯ' ಅನ್ನೋ ಪುಸ್ತಕ ಹತ್ತನೇ ತಾರೀಕು ಬೆಳಿಗ್ಗೆ ಹತ್ತೂ ಮೂವತ್ತಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅನಾವರಣಗೊಳ್ಳುತ್ತಿದೆ. ವಿಜಯಕನರ್ಾಟಕದಲ್ಲಿ ಅತ್ಯಂತ ಪಾಪ್ಯುಲರ್ ಆದ ಕಾಲಂ ಅದು. ಗುನುಗುನಿಸುವ ಹಾಡು ಹುಟ್ಟಿದ್ದರ ಹಿಂದೆ ಒಂದು ಪ್ರೀತಿ ಇದ್ದ ಹಾಗೆ ದುಃಖವೂ ಇರುತ್ತದೆ. ಪ್ರತಿ ಹಾಡಿಗೂ ಒಂದು ಇತಿಹಾಸ ಇದ್ದೇ ಇರುತ್ತದೆ. ಅಂತ ಹಾಡುಗಳ ಇತಹಾಸವೇ ಈ ಪುಸ್ತಕ. ಅವತ್ತು ನಟ ರಮೇಶ್ ಅರವಿಂದ್ ಬರ್ತಿದಾರೆ. ವಿಶ್ವೇಶ್ವರಭಟ್, ಅನಂತ ಚಿನಿವಾರ್ ಮುಂತಾದವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಒಂದಿಷ್ಟು ಹಾಡುಗಳಿವೆ. ನೀವು ಅವತ್ತು ಬಿಡುವು ಮಾಡಿಕೊಂಡು ಬರಲೇಬೇಕು ಇಲ್ಲದಿದ್ದರೆ ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ ಮಣಿ. ಬಹುಶಃ ಅವರಿಗಿಂತ ಮೊದಲೇ ಅವತ್ತು ನಾನಲ್ಲಿರುತ್ತೇನೆ.
ನೀವೂ ಬನ್ನಿ... ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ.
ಮಿಸ್ ಮಾಡಲ್ಲ ತಾನೆ.