Friday, August 29, 2008

ಹೇಗೆ ಹೇಳಲೀ ಅವನೇ ಬಂದಿದ್ದು ಅಂತ...




ಅವತ್ತು ಮನೆ ಬಾಗಿಲು ತೆಗೆದಾಗ
ಮನೆಯ ಒಳಗಡೆ ನಾನಿರಲಿಲ್ಲ

ಒಳಗೆ ಬಂದವನಿಗೆ ಬಾಯಾರಿಕೆ
ಎಂಥದೋ ಚಡಪಡಿಕೆ
ನೋಡಿದರೆ ಕಳ್ಳನಂತೆ, ಮಳ್ಳನಂತೆ
ಗುಮ್ಮನ ಗುಸಕ್
ಏನೋ ಕದಿಯಲು ಬಂದಿದ್ದಾನೆಯೇ?
ಕದ್ದುಬಿಟ್ಟರೇನು ಗತಿ ಮಗಳ ಹೃದಯ ?

ಅಮ್ಮ ಅದ್ದರಿಸಿದ್ದಾಳೆ
ಹಚಾ ಹಚಾ
ಸುಮ್ಮನೆ ಹಾಗೆ ಯಾರ ಮನೆಯಂಗಳಕ್ಕೂ
ಬರಬಾರದು!
ಮನದಂಗಳಕ್ಕೂ!

ಆದರೂ
ಅವನ ಕಣ್ಣಿದೆಯಲ್ಲೇ
ನೀಲಿ ಬಾನನ್ನೆಲ್ಲ ತಂದು ಎರಕ ಹುಯ್ದಂತೆ
ಹುಬ್ಬೋ ಕಡುಕಪ್ಪು ಕಾಮನ ಬಿಲ್ಲು
ಎದೆ ಸೆಟೆದು ನಿಂತರೆ ವೀರಬಾಹು

ಎಲ್ಲಾ ಸರಿ
ಸರಿಯಿಲ್ಲ ಅವನು ಇಲ್ಲಿಗೆ ಬಂದದ್ದು
***
ನಾನು ಹೋಗುವಷ್ಟರಲ್ಲಿ
ಅವನು ಹೋಗಿಯಾಗಿತ್ತು

ಅಮ್ಮ ಕೇಳಿದಳು
ಬಂದವನು ಯಾರೆ?

ಯಾರೆಂದು ಹೇಳಲಿ?
ಯಾರೋ ಕಳ್ಳನಿರಬೇಕು ಬಿಡು!

ಕದಿಯುವುದಕ್ಕೆ ನಮ್ಮಲ್ಲೇನಿದೆ
ನನ್ನ ಹೃದಯವೊಂದನ್ನು ಬಿಟ್ಟು

ಆದರೂ
ಖಾಲಿ ಎದೆಯ ಒಳಗೊಂದು
ಕನಸು ಜೀಕುತ್ತಿದೆ
ಮನಸ ದಾರಿಯಲ್ಲಿ
ಮಲ್ಲಿಗೆ ಅರಳಿದೆ

ಹಾರಿ ಬಿಡಲಾ?

ಬಾಗಿಲಲ್ಲಿ ಅವನ ಕೈಯ್ಯ ಮಿದುವಿತ್ತು
ಮೈಯ್ಯ ಘಮವಿತ್ತು
ಬಿಟ್ಟು ಹೋದ ಉಸಿರಿನ
ಪಸೆ ಇತ್ತು

ಅಮ್ಮನಿಗೋ ಆತಂಕ
ಹೇಗೆ ಹೇಳಲೀ ಅವನೇ ಬಂದಿದ್ದು ಅಂತ!

Thursday, August 28, 2008

ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ?

ಅವನು ರಿಚ್ rich ಅಪ್ಪ.ಮೂರು ತಲೆಮಾರು ತಿಂದರೂ ಮುಗಿಯದ ಆಸ್ತಿ ಅವನ ಬಳಿಯಿತ್ತು. ಕಾರು, ಬಂಗಲೇ, ಎಸ್ಟೇಟ್. ಹೇಳಬೇಕೆಂದ್ರೆ ಯಾವುದೇ ಹೊಸ ಕಾರು ಬಂದರೂ ಅದರ ಮಾರನೇ ದಿನವೇ ಇವರ ಮನೆಯ ಮುಂದೆ ನಿಂತಿರುತ್ತಿತ್ತು, ಅಷ್ಟರಮಟ್ಟಿಗೆ ಈ ಅಪ್ಪ ಕರೋಡ್ಪತಿ.ಇಂಥ ಕರೋಡ್ಪತಿಗೆ ತೇಜ ಅನ್ನೋ ಒಬ್ಬನೇ ಸುಪುತ್ರ. ಇಂಜಿನಿಯರಿಂಗ್ ಓದುತ್ತಿದ್ದ. ಈ ಬಾರಿ ಕೊನೆ ಸೆಮಿಸ್ಟರ್ನಲ್ಲಿ ಹೈಯೆಸ್ಟ್ ಮಾಕ್ಸರ್್ ತಗೊಂಡೇ ತಗೋತೀನಿ. ಕಸಮ್ ಡ್ಯಾಡ್ . ಆದ್ರೆ ನನ್ನ ಬತರ್್ಡೇಗೆ ನನಗೊಂದು ಸ್ಕೋಡ ಕಾರು ಬೇಕೇ ಬೇಕು ಅಂತ ಅಪ್ಪನಿಗೆ ದುಂಬಾಲು ಬಿದ್ದಿದ್ದ. ಒಬ್ಬನೇ ಮಗ, ಇರುವ ಆಸ್ತಿಯನ್ನೆಲ್ಲ ಯಾರಿಗೇ ಕೊಡೋದು? ಮಜ್ಜವಾಗಿರಲಿ ನನ್ನ ಮಗ ಅನ್ನೋದು ಅಪ್ಪನ ಆಸೆ. ಹಾಗಿದ್ದೂ ತುಂಬಾ ಸಲುಗೆ ಬಿಟ್ಟರೆ ಎಲ್ಲಿ ಮಗ ದಾರಿ ತಪ್ಪಿ ಹೋದಾನೋ ಅನ್ನುವ ಆತಂಕವೂ ಒಳಗೊಳಗೇ ಕಾಡುತ್ತಿತ್ತು. ಮಗ ಸ್ಕೋಡ ಕೇಳಿದನಲ್ಲ ಆವಾಗ, ನೋಡೋಣ ಮೈ ಸನ್ ಅಂತ ಬೇಕಂತಲೇ ಮಾತು ತೇಲಿಸಿಬಿಟ್ಟಿದ್ದ. ಅಪ್ಪ ನನಗೆ ಸ್ಕೋಡಾ ಕಾರು ಕೊಡಿಸದೇ ಇರೋದಿಲ್ಲ. ಯಾಕೆಂದ್ರೆ ನಾನಂದ್ರೆ ಅಪ್ಪನಿಗೆ ಅಷ್ಟಿಷ್ಟ. ಇಷ್ಟಕ್ಕೂ ಅವರು ನಾನು ಏನು ಕೇಳಿದೆನೋ ಅವನ್ನೆಲ್ಲ ಕೊಡಿಸಿಯೇ ಇದಾರೆ! ಇದನ್ನೂ ಹಾಗೇ, ಖಂಡಿತಾ ಕೊಡಸ್ತಾರೆ! ನನ್ನ ಬತರ್್ಡೇ ಪಾಟರ್ಿ ಮುಗಿಸಿಕೊಂಡು ಮೈ ಸ್ವೀಟ್ ಹಾಟರ್್ ಋತುವನ್ನು ಕರೆದುಕೊಂಡು ಜುಮ್ಮಂತ ಒಂದು ರೌಂಡ್ ಹೋಗಿ ಬಂದುಬಿಡಬೇಕು. ಸಾಧ್ಯವಾದರೇ ಅಪ್ಪನಿಗೆ ಸುಳ್ಳು ಹೇಳಿ ಅವಳನ್ನು ಬೇಕಲ್ ಫೋಟರ್್ಗೆ ಕರ್ಕೊಂಡು ಹೋಗಬೇಕು. ಅಲ್ಲಿ ಕೋಟೆ ಮೇಲೆ ನಿತ್ಕೊಂಡು ಅವಳಿಗೊಂದು ಕೆಂಪು ಗುಲಾಬಿ ಕೊಡ್ತಾ ಕೊಡ್ತಾ ಛಕ್ಕಂತ ಒಂದು ಮುತ್ತು ಕೊಟ್ಟುಬಿಡಬೇಕು. ಹೇಗೆ ರಿಯಾಕ್ಟ್ ಮಾಡ್ತಾಳೋ ಏನೋ? ಬಟ್ ನಾನು ಮಾಡೇ ಮಾಡ್ತೀನಿ. ಅದಕ್ಕಿಂತ ಥ್ರಿಲ್ಲಿಂಗ್ ಆದ ವಿಷ್ಯ ಇನ್ನೊಂದುಂಟೆ. ದೇವರೇ ಅಪ್ಪ ಕಾರು ಕೊಡಿಸಲಿ.... ಋತುಗೆ ಪಪ್ಪಿ ಕೊಡುವ ಭಾಗ್ಯ ನನ್ನದಾಗಲೀ...ಹೀಗೇನೋ ಹಂಬಲಿಸಿದ. ಆ ದಿನ, ಬತರ್್ಡೇ ದಿನವೂ ಬಂತು. ಹೊಸ ಬಟ್ಟೆ, ಹೊಸ ಕಾರು, ಋತುಗೆ ಕೊಡುವ ಮುತ್ತು ನೆನಸಿಕೊಂಡೇ ತೇಜು ರೋಮಾಂಚಿತನಾಗಿದ್ದ. ಇಂಜಿನಿಯರಿಂಗ್ ಅನ್ನು ಹೈಯಸ್ಟ್ ಮಾಕ್ಸರ್್ ತೆಗೆದು ಪಾಸು ಮಾಡಿದ್ದ. ಅಪ್ಪ ಖುಷಿ ಖುಷಿಯಾಗಿದ್ದರು. ಕಾರು ಗ್ಯಾರಂಟಿ ಬಿಡು ಅಂದುಕೊಂಡ. ಬೆಳಿಗ್ಗೆ ಎದ್ದವನಿಗೆ ಅಪ್ಪನದೇ ಮೊದಲ ವಿಷ್. ಹ್ಯಾಪಿ ಬತರ್್ ಡೇ ಟು ಯು ಮೈ ಸನ್. ಜೊತೆಗೆ ಕೈಯಲ್ಲೊಂದು ಕೆಂಪು ಕೆಂಪಾದ ಕಾಗದದಿಂದ ವ್ರಾಪ್ ಮಾಡಿದ ಗಿಫ್ಟ್. ಎಂದಿನಂತೆ ಒಂದು ಸಿಹಿ ಮುತ್ತು. ತೇಜುನ ತಲೆಯ ತುಂಬಾ ಸ್ಕೋಡಾ ಕಾರೇ! ಖುಷಿ ಖುಷಿಯಿಂದ ಗಿಫ್ಟ್ಪ್ಯಾಕ್ ಓಪನ್ ಮಾಡಿದರೆ ಒಳಗೇನಿದೆ? ಫಳ ಫಳ ಹೊಳೆಯುವ ಭಗವದ್ಗೀತೆ ಪುಸ್ತಕ. ತೇಜುಗೆ ಶಾಕ್. ವಾಟ್ ಈಸ್ ದಿಸ್ ಡ್ಯಾಡ್. ನಿಮ್ಮಿಂದ ನಾನು ಈ ಭಗವದ್ಗೀತೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಐ ಹೇಟ್ ಯು ಡ್ಯಾಡಿ. ನಾನೀಗಲೇ ಮನೆ ಬಿಟ್ಟು ಹೋಗ್ತಾ ಇದೀನಿ ಅಂತ ಅಪ್ಪನ ಒಂದು ಮಾತಿಗೂ ಕಾಯದೇ ಕಣ್ಣೀರಾಕಿಕೊಂಡು ಹೊರಟುಬಿಟ್ಟಿದ್ದ. ಹೋದವನು ಕೆಲವೇ ವರ್ಷಗಳಲ್ಲಿ ಮುಂಬೈನ ದೊಡ್ಡ ಬಿಜಿನೆಸ್ ಮ್ಯಾನ್ ಎನಿಸಿಕೊಂಡ. ತೇಜು ಈಗ ಬಿಜಿ ಬಿಜಿ ಬಿಜಿ. ಹೀಗಿದ್ದವನಿಗ,ೆ ಎಷ್ಟೋ ವರ್ಷಗಳ ನಂತರ ಅಪ್ಪನನ್ನ ನೋಡಬೇಕು ಅಂತ ಅನಿಸಿದೆ. ಹೆಂಡತಿ, ಮಕ್ಕಳು, ಕೆಲಸ, ಆಸ್ತಿ ಮಾಡುವುದರಲ್ಲೇ ವಯಸ್ಸಾದ ಅಪ್ಪನನ್ನು ಮರೆತುಬಿಟ್ಟೆನಲ್ಲ ಅಂತ ಕಾಡುವುದಕ್ಕೆ ಶುರುವಾಗಿದೆ. ತಕ್ಷಣ ಹೊರಡಬೇಕು ಅಂತ ಅಂದುಕೊಂಡವನ ಮೊಬೈಲ್ಗೊಂದು ಮೆಸೇಜು. ನಿನ್ನ ಅಪ್ಪ ತೀರಿಕೊಂಡು ತುಂಬಾ ದಿನವಾಯಿತು. ನೀನು ಬಂದು ಇಲ್ಲಿನ ಆಸ್ತಿಪಾಸ್ತಿಗೊಂದು ವ್ಯವಸ್ಥೆ ಮಾಡು ಅಂತ. ಅರ್ರೆ ಅಪ್ಪ ತೀರಿಕೊಂಡರೇ? ಛೇ ನನಗೆ ಗೊತ್ತೇ ಆಗಲಿಲ್ಲವಲ್ಲ. ಅಪ್ಪ ನನ್ನನ್ನು ಎಷ್ಟು ಮಿಸ್ ಮಾಡಿಕೊಂಡರೋ ಏನೋ! ಅವರಿಗೆ ನನ್ನ ಮೇಲೆ ಅತೀವ ಪ್ರೀತಿ ಇತ್ತು. ಅಮ್ಮ ಸತ್ತ ಮೇಲೆ ಮಲತಾಯಿ ಬಂದ್ರೆ ನನ್ನ ಮಗನನ್ನು ಹೇಗೆ ನೋಡಿಕೊಳ್ಳುತ್ತಾಳೋ ಅನ್ನುವ ಆತಂಕದಿಂದ ಎರಡನೇ ಮದುವೆಯನ್ನೂ ಆಗದೇ ಒಬ್ಬಂಟಿಯಾಗಿ ಇಡೀ ಜೀವನ ಕಳೆದುಬಿಟ್ಟರಲ್ಲ! ಅಪ್ಪನನ್ನು ನಾನು ಕೊನೆ ಗಳಿಗೆಯಲ್ಲಿಯಾದರೂ ಸರಿಯಾಗಿ ನೋಡಿಕೊಳ್ಳಬೇಕಿತ್ತು. ಛೇ ನಾನು ತಪ್ಪು ಮಾಡಿಬಿಟ್ಟೆ! ಕಣ್ಣು ಒದ್ದೆ ಒದ್ದೆ. ಮನಸ್ಸಿನ ತುಂಬಾ ರೋದನ. ಅಪ್ಪನಿಗಾಗಿ ಹಂಬಲಿಸಿದ. ತಕ್ಷಣ ಊರಿಗೆ ಹೊರಟ. ಅಲ್ಲಿ ಮನೆಯ ಹೊಸ್ತಿಲು ತುಳಿದರೇ ಅಪ್ಪನದೇ ನೆನಪು. ಅಪ್ಪನ ತೊಡೆಯ ಮೇಲೆ ಕುಳಿತು ಕೆನ್ನೆ ಗಿಂಡುತಿದ್ದದ್ದು, ಹೆಗಲ ಮೇಲೆ ಕೂರಿಸಿಕೊಂಡು ನಿಂತಿದ್ದು, ಬೆನ್ನ ಮೇಲೆ ಉಪ್ಪು ಮೂಟೆ ಆಡಿಸಿದ್ದು, ಬೆಲೂನ್ ಕಟ್ಟಿ ಆಕಾಶಕ್ಕೆ ಆರಿಸಿದ್ದು, ಕೊನೆಯ ಬತರ್್ಡೇವರೆಗಿನ ಒಟ್ಟು ಇಪ್ಪತ್ತೈದು ಬತರ್್ಡೇ ಫೋಟೋಗಳು. ಅದರಲ್ಲಿ ಮಿಸ್ ಮಾಡದೇ ಅಪ್ಪ ಕೆನ್ನೆಗಿಡುತ್ತಿದ್ದ ಸಿಹಿಸಿಹಿ ಮುತ್ತು....ಯಾಕೋ ದುಃಖ ತಡೆಯಲಾಗಲಿಲ್ಲ. ಅಲ್ಲೇ ಹೊಸ್ತಿಲ ಬಳಿ ಕುಳಿತು ಬಿಕ್ಕತೊಡಗಿದ. ಆದರೆ ಎಲ್ಲಿ ಶಮನವಾದೀತು? ಯಾರೋ ಬಂದು, ನಿಮ್ಮಪ್ಪ ಒಂದಿಷ್ಟು ಇಂಪಾಟರ್ೆಂಟ್ ಅನ್ನುವ ವಸ್ತುಗಳನ್ನೆಲ್ಲ ಒಂದು ರೂಮಿನಲ್ಲಿಟ್ಟುಹೋಗಿದ್ದಾರೆ. ನೋಡಿ ಅಂದ್ರು. ಮೆಲ್ಲಗೆ ರೂಮಿನ ಬಾಗಿಲು ತೆಗೆದು ಒಳ ಅಡಿ ಇಟ್ಟರೆ ಅಷ್ಟೆಲ್ಲ ಇಂಪಾಟರ್ೆಂಟ್ ವಸ್ತುಗಳ ನಡುವೆ ಅದೇ ಕೆಂಪು ಕೆಂಪಾದ ವ್ರಾಪರ್ನ ಗಿಫ್ಟ್ಪ್ಯಾಕ್. ಮೆಲ್ಲಗೆ ಅದರ ಮೈ ದಡವಿ ಒಳಗಿನ ಭಗವದ್ಗೀತೆ ತೆಗೆದರೆ ಠಣ್ ಅಂತ ಕೆಳಗೆ ಏನೋ ಬಿದ್ದಂಗಾಯಿತು. ಏನು ಅಂತ ನೋಡಿದರೆ ಸ್ಕೋಡ ಕಾರಿನ ಕೀ. ಅದರ ಟ್ಯಾಗ್ನಲ್ಲಿ ನಮೂದಾದ ತನ್ನ ಇಪ್ಪತ್ತೈದನೆಯ ಬತರ್್ಡೇ ಡೇಟ್ ಮತ್ತು ವಿಷಸ್. ಅಂದ್ರೆ ಅಪ್ಪ ನನಗೆ ಕೊಡಬೇಕೆಂದಿದ್ದ ಕಾರ್ ಕೀಯನ್ನ ಈ ಪುಸ್ತಕದೊಳಗಿಟ್ಟು ಕೊಟ್ಟರಾ? ದೇವರೆ ನನಗೇನಾಗಿತ್ತು ಅವತ್ತು? ಕ್ಷಣ ಪುಸ್ತಕ ತೆಗೆದು ನೋಡಿದ್ದರೂ ನನ್ನ ಅಪ್ಪ ನನ್ನ ಬಳಿಯೇ ಇರುತ್ತಿದ್ರಲ್ಲ! ಆ ಒಂದು ತಾಳ್ಮೆಯನ್ನೂ ಯಾಕೆ ಕಿತ್ತುಕೊಂಡಿಬಿಟ್ಟೆ ದೇವರೇ? ಕಣ್ಣು ತಿರ್ಗಾ ಮಂಜಾದವು. ನಿಲ್ಲಲಾಗದೇ ಹೊರಕ್ಕೆ ಬಂದು ಕುಳಿತವನ ಎದೆಯ ತುಂಬಾ ದುಃಖದ ಹೊಳೆ. ಎದುರಿನ ಫೋಟೊದಲ್ಲಿ ಆಳೆತ್ತರಕ್ಕೆ ನಿಂತಿದ್ದ ಅಪ್ಪನ ಕಣ್ಣಲ್ಲೂ ಅಂತದೇ ದುಃಖವಿತ್ತಾ? ಗೊತ್ತಿಲ್ಲ!

Friday, August 22, 2008

ಆರು ಹಾರ್ರರ್ ಸ್ಟೋರೀಸ್


1.

ಊರಿಗೆ ಆರು ತಿಂಗಳಾದ ಮೇಲೆ ಹೊರಟಿರ್ತೀರಿ. ಇರೋದೊಂದೇ ಬಸ್ ಆ ರೂಟ್ನಲ್ಲಿ. ಹೋಗಲೋ ಬೇಡವೋ ಅಂತ ಯೋಚಿಸಿ, ಸರಿ ಯಾರಾದ್ರೂ ಊರಿನವರು ಸಿಗಬಹುದು ಅಂತ ಬಸ್ ಹತ್ತುತ್ತೀರಿ. ಆದ್ರೆ ಇಳಿಯುವಾಗ ನಿಮ್ಮನ್ನು ಬಿಟ್ಟು ಯಾರೊಬ್ಬರೂ ಬಸ್ನಿಂದ ಇಳಿಯುವುದಿಲ್ಲ. ಆಗಲೇ ಎದೆಯಲ್ಲಿ ನಡುಕ ಶುರುವಾಗುತ್ತದೆ. ಮುಖ್ಯ ದಾರಿಯಿಂದ ಒಂದು ಕಿಲೋಮೀಟರ್ ಒಳಕ್ಕೆ ಹೋದ್ರೆ ಮಾತ್ರ ನಿಮ್ಮ ಊರು ಸಿಗೋದು. ನೋ ಸ್ಟ್ರೀಟ್ ಲೈಟ್. ಎರಡೂ ಕಡೆ ಕರಿ ಕಂಬಳಿ ಹೊದ್ದುಕೊಂಡು ಅವಿತು ಕುಳಿತಂಥ ಜಾಜಿ ಮುಳ್ಳಿನ ಪೊದೆಗಳು. ಅದನ್ನಾವರಿಸಿಕೊಂಡ ಕಗ್ಗತ್ತಲು. ಜೀರುಂಡೆಯ ಗುಂಯ್ ಗುಂಯ್. ಮೈ ಸೋಕುವ ತಣ್ಣನೆಯ ಗಾಳಿ. ಯಾರಾದ್ರೂ ಸಿಕ್ಕಾರೇನೋ ಅಂತ ಎರಡು ನಿಮಿಷ ಕಾದು ಕಾಲೆಳೆದುಕೊಂಡು ಒಬ್ಬರೇ ಹೊರಡ್ತೀರಿ. ಅಜ್ಜಿ ಹೇಳಿದ್ದ ಕೊಳ್ಳಿ ದೆವ್ವ ನೆನಪಾಗುತ್ತೆ. ಹುಣಸೇ ಮರದಲ್ಲಿ ಉಲ್ಟಾ ನೇತಾಡೋ ದೆವ್ವಗಳು ನೆನಪಾಗ್ತವೆ. ಗೊಬ್ಬರ ಸಿಗಲಿಲ್ಲ ಅಂತ ಆರು ತಿಂಗಳ ಹಿಂದೆ ನೇಣುಹಾಕಿಕೊಂಡ ಶಾಂತಪ್ಪ ನೆನಪಾಗ್ತಾನೆ. ದೇವರೇ ಹೇಗಪ್ಪಾ ಹೋಗೋದು? ಅಂದುಕೊಳ್ಳುವ ಹೊತ್ತಿಗೆ ಯಾರೋ ಹಿಂದಿನಿಂದ ನಿಮ್ಮ ಹೆಸರಿಡಿದು ಕರೆದಂತಾಗುತ್ತದೆ. ಗಾಬರಿಯಿಂದ ತಿರುಗಿ ನೋಡಿದರೆ ಶ್ರೀನಿವಾಸ. ಹಳೇ ಫ್ರೆಂಡ್. ಅರೇ ನೀನೇನೋ? ಎಷ್ಟು ದಿನ ಆಯ್ತು ನಿನ್ನನ್ನ ನೋಡಿ. ಬಸ್ ಲೇಟ್ ಆಯ್ತಾ? ಒಬ್ಬನೇ ಹೋಗೋದಕ್ಕೆ ಭಯ ಅನಿಸಿರಬೇಕಲ್ವಾ? ನಾನಿದೀನಲ್ಲ ಜೊತೆಗೆ, ಬಾ ಬಾ. ಹೇಗಿದೀಯಾ? ಸಿಟಿಗೆ ಹೋದವ್ನು ನಮ್ಮೂರ್ಗೆ ಬರೋದೆ ಬಿಟ್ಟಬಿಟ್ಟಲ್ಲಪ್ಪ! ನಾನೂ ಪಕ್ಕದೂರಿಗೆ ಹೋಗಿದ್ದೆ ಹೊರಡೋದು ಲೇಟಾಗೋಯ್ತು. ಆಮೇಲೆ ಏನ್ ಸಮಾಚಾರ? ಅಂತ ನಿಮ್ಮ ಪಕ್ಕದಲ್ಲೇ ಭುಜಕ್ಕೆ ಭುಜ ತಾಕಿಸಿಕೊಂಡು ನಡೆಯತೊಡಗುತ್ತಾನೆ. ನಿಮಗೆ ಹೋದ ಜೀವ ಬಂದಂತಾಗುತ್ತದೆ. ಕೊನೆಗೂ ಒಬ್ಬ ಗೆಳೆಯನನ್ನ ಕಷ್ಟ ಕಾಲಕ್ಕೆ ಕಳಿಸ್ದಲ್ಲ ಥ್ಯಾಂಕ್ ಗಾಡ್ ಅಂದ್ಕೊಳ್ತೀರಿ.ಹಾಗೆ ಮಾತಾಡ್ತಾ ಮಾತಾಡ್ತಾ ಮಾತಾಡ್ತಾ ಊರು ಸಮೀಪಿಸುತ್ತದೆ. ನಿಮ್ಮ ಮನೆಯಿಂದ ಎರಡು ಗಲ್ಲಿ ದಾಟಿದರೆ ಶ್ರೀನಿವಾಸನ ಮನೆ, ಹೌದಾ? ನಿಮ್ಮ ಮನೆ ಹತ್ತಿರ ಆಗ್ತಿದ್ದ ಹಾಗೇ ನಿಮ್ಮನ್ನು ದಾಟಿ ಆಯ್ತಪ್ಪ ಸಿಕ್ತೀನಿ. ನೆಕ್ಸ್ಟ್ ಟೈಮ್ ಬಂದಾಗ ಅದೇ ದಾರಿಯಲ್ಲಿ ಕಾಯ್ತಾ ಇರ್ತೀನಿ. ಮರೀಬೇಡ ಅಂತ ಕೈ ಬೀಸಿ ಹೊರಟುಬಿಡ್ತಾನೆ. ನೀವು ಗುಗ್ಗು ಥರ ಓಕೆ ಬಾಯ್ ಅಂತೀರಿ.ಮನೆಗೆ ಹೋದ್ರೆ ಅಮ್ಮ, ಇಷ್ಟೊತ್ತಲ್ಲಿ ಯಾಕೋ ಬರೋದಕ್ಕೆ ಹೋದೆ. ಜನ ಸಂಜೆ ಆದಮೇಲೆ ತಿರುಗಾಡೋದಕ್ಕೆ ಹೆದರ್ತಾರೆ. ಬೆಳಿಗ್ಗೆ ಬಂದಿದ್ರೂ ಆಗ್ತಿತ್ತಪ್ಪ. ಏನು ಅಂತ ಕೆಲಸ ಇಲ್ಲಿ ಕಡಿದುಗುಡ್ಡೆ ಹಾಕೋದಿತ್ತು ಅಂತಾರೆ.ಇಲ್ಲಮ್ಮ ಒಬ್ಬನೇ ಬರಲಿಲ್ಲ. ಜೊತೇಲಿ ನನ್ನ ಹಳೇ ಗೆಳೆಯ ಶ್ರೀನಿವಾಸ ಇದ್ನಲ್ಲ ಅವನು ಸಿಕ್ಕಿದ್ದ. ಜೊತೇಲೇ ಬಂದ್ವಿ!ಶ್ರೀನಿವಾಸಾನಾ?ಯಾಕಮ್ಮ?ಅವನು ಸತ್ತು ಎರಡು ತಿಂಗಳಾಯ್ತಲ್ಲೋ?ಈ ಮಾತು ಕೇಳಿದ ಮೇಲಿನ ನಿಮ್ಮ ಸ್ಥಿತಿ ನನ್ನ ಊಹೆಗೂ ನಿಲುಕುತ್ತಿಲ್ಲ.

2.

ಇಡೀ ಜಗತ್ತು ನಿನರ್ಾಮವಾಗಿಹೋಗಿರುತ್ತೆ. ಆದ್ರೆ ಅದು ಹೇಗೋ ಒಬ್ಬನೇ ಒಬ್ಬ ತಪ್ಪಿಸಿಕೊಂಡು ಕದವಿಕ್ಕಿಕೊಂಡು ಕುಳಿತುಬಿಡುತ್ತಾನೆ. ಅವನಿಗೂ ಗೊತ್ತು ಈ ಜಗತ್ತಿನಲ್ಲಿ ನನ್ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಅಂತ. ಅಂತ ಸಮಯದಲ್ಲಿ ನಡುರಾತ್ರಿಯಲ್ಲಿ ಯಾರೋ ಬಾಗಿಲು ತಟ್ಟಿದರೇ?ಇದಕ್ಕಿಂತ ಹಾರ್ರರ್ ಸ್ಟೋರಿ ಇದೆಯಾ?

3.

ಯಾವುದೋ ತಮಿಳು ಫಿಲ್ಮ್ನಲ್ಲಿ ನೋಡಿದ್ದು.ಒಬ್ಬ ರಾತ್ರಿ ಕಾಡಿನಲ್ಲಿ ಹೋಗ್ತಿರ್ತಾನೆ. ಇದ್ದಕ್ಕಿದ್ದಂತೆ ಬೀಡಿ ಸೇದಬೇಕು ಅನ್ನೋ ಆಸೆಯಾಗುತ್ತೆ. ಆದ್ರೆ ಬೀಡಿ ಇದೆ ಬೆಂಕಿಪೊಟ್ಟಣ ಇಲ್ಲ. ಕೊರೆವ ಚಳಿ ಬೇರೆ. ಏನ್ ಮಾಡೋದು?ಹಾಗಂದುಕೊಂಡು ಎರಡು ಹೆಜ್ಜೆ ಇಟ್ಟಿಲ್ಲ ಎದುರುಗಡೆಯಿಂದ ಒಬ್ಬ ಬರ್ತಿದ್ದಾನೆ. ಆಹಾ ಒಳ್ಳೇದೇ ಆಯ್ತು ಅಂದುಕೊಂಡು.ಅಣ್ಣ ಬೆಂಕಿಪೊಟ್ಟಣ ಇದೆಯಾ?ಇದೆ. ಈತ ಅವನ ಹತ್ತಿರಕ್ಕೆ ಹೋಗಿ ನಿಲ್ಲುತ್ತಾನೆ. ಆ ವ್ಯಕ್ತಿಯೇ ಬೀಡಿಗೆ ಬೆಂಕಿ ಹಚ್ಚುತ್ತದೆ. ಹಾಗೆ ಹಚ್ಚುವಾಗ ಕೈ ಜಾರಿ ಬೆಂಕಿಪೊಟ್ಟಣ ವ್ಯಕ್ತಿಯ ಕಾಲ ಕೆಳಕ್ಕೆ ಬಿದ್ದುಹೋಗುತ್ತದೆ.ಈತ ಬೆಂಕಿಪೊಟ್ಟಣ ಎತ್ತಿಕೊಳ್ಳೋದಕ್ಕೆ ಅಂತ ಬಗ್ಗುತ್ತಾನೆ ಅಷ್ಟೆ.ಎದುರಿಗೆ ನಿಂತ ವ್ಯಕ್ತಿಯ ಕಾಲೇ ಇರುವುದಿಲ್ಲ.

4.

ನಮ್ಮೂರಿನಲ್ಲಿ ಕೋಟೆ ಮೈದಾನ ಅಂತ ವಿಶಾಲವಾದ ದಿಬ್ಬ ಇತ್ತು. ಅಲ್ಲಿ ಹಳೇ ಬಾವಿ, ಹಳೇ ಕೋಟೆ, ಹಳೇ ಹಳೇ ಅನ್ನಬಹುದಾದ ಎಂಥೆಂತದೋ ಕಲ್ಲುಗಳು. ಇನ್ನೂ ಏನೇನೋ ಇದ್ದವು. ಜೊತೆಗೆ ಅಲ್ಲೇ ಅದರ ಪಕ್ಕದಲ್ಲೇ ಊರಿನ ಸ್ಮಶಾನ.ನಮ್ಮೂರಿನಲ್ಲಿ ಕುಖ್ಯಾತ ಕಳ್ಳ ಎಂದೇ ಪ್ರಖ್ಯಾತವಾಗಿದ್ದ ಬಸವ ಅನ್ನೋನು ರಾತ್ರಿ ಕೆಲಸ ಮುಗಿಸಿ ಸರಿಹೊತ್ತಿನಲ್ಲಿ ಹಿಂತಿರುಗ್ತಿದ್ದದ್ದು ಎಲ್ಲರಿಗೂ ಗೊತ್ತಿತ್ತು.ಅವತ್ತೂ ಹಾಗೇ ಬರ್ತಾ ಇದ್ದನಂತೆ.ಇನ್ನೇನು ತನ್ನ ಮನೆ ಹೊಕ್ಕಬೇಕು ಅನ್ನುವಷ್ಟರಲ್ಲಿ ಯಾರೋ ಶಿಳ್ಳೆ ಹಾಕಿ ಕರೆದಿದ್ದಾರೆ. ತಿರುಗಿ ನೋಡಿದ್ರೆ ಪೊಲೀಸು.ಅಯ್ಯಯ್ಯಪ್ಪೋ ಅಂತ ಮನೆಗೂ ಹೋಗದೇ ಎದ್ದೆನೋ ಬಿದ್ದೆನೋ ಅಂತ ಓಡಿದ್ದಾನೆ.ಹಾಗೆ ಓಡಿ ಓಡಿ ಸುಸ್ತಾಗಿ ಊರ ಹೊರಗಿನ ಅದೇ ಕೋಟೆ ಬಾವಿಯ ಹತ್ತಿರಕ್ಕೆ ಬಂದು ಬಾವಿ ಹಿಂದೆ ಬಚ್ಚಿಟ್ಟುಕೊಂಡಿದ್ದಾನೆ. ಆಮೇಲೆ ಎರಡು ನಿಮಿಷ ಬಿಟ್ಟು ಮೆಲ್ಲಗೆ ಎದ್ದು ನೋಡಿದ್ರೆ ಯಾರೂ ಇಲ್ಲ.ನನ್ನ ಜೊತೆ ಓಡೋದಕ್ಕೆ ಅವನಿಗೆಲ್ಲಿ ಸಾಧ್ಯ ಅಂತಂದುಕೊಂಡು ಮೆಲ್ಲಗೆ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದ್ದಾನೆ.ಅಲ್ಲಿ ನೋಡಿದ್ರೆ ಮನೆಯ ಜಗಲಿಯ ಮೇಲೆ ಪೊಲೀಸ್ ಬೀಡಿ ಸೇದ್ತಾ ಕುಳಿತಿದ್ದಾನೆ. ಯಾಕೋ ಟೈಮ್ ಸರಿಗಿಲ್ಲ ಅಂದುಕೊಂಡು ಇವತ್ತು ಆ ಕೋಟೆ ಮೈದಾನದಲ್ಲೇ ಬೆಳಗಿನ ಜಾವದ ತನಕ ಕಾಲ ಕಳೆದರಾಯ್ತು ಅಂತ ವಾಪಸ್ ಹೋಗಿದ್ದಾನೆ.ಅಲ್ಲಿ ಹೋಗಿ ಇನ್ನೂ ಐದು ನಿಮಿಷ ಆಗಲಿಲ್ಲ ಯಾರೋ ಭುಜದ ಮೇಲೆ ಹಿಂದಿನಿಂದ ಕೈ ಇಟ್ಟಿದ್ದಾರೆ.ಅದೇ ಪೊಲೀಸು. ಅಣ್ಣ ತಪ್ಪಾಯ್ತು ಬಿಟ್ಟುಬಿಡು. ಇನ್ನೊಂದ್ ಸಾರಿ ಕಳ್ಳತನ ಮಾಡೋಲ್ಲ ಅಂತ ಗೋಗರೆದಿದ್ದಾನೆ ಬಸವ. ಪೊಲೀಸ್ದು ಮಾತೇ ಇಲ್ಲ.ಇನ್ನೇನು ಇವನು ಅಲ್ಲಿಂದ ಕದಲಬೇಕು.ಅಷ್ಟರಲ್ಲಿ ಹೆದರ್ಕೊಂಡ್ ಬಿಟ್ಯಾ. ನಾನು ನಿಜವಾದ ಪೊಲೀಸ್ ಅಲ್ಲ. ನಾಟಕ ಮಾಡ್ತಿದ್ದನಲ್ಲ ರುದ್ರಣ್ಣ ಅವನು. ನನಗೆ ಪೊಲೀಸ್ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಏನ್ ಮಾಡೋದು ಅದೆಂಥದೋ ಜ್ವರ ಬಂದು ಸತ್ತೋಗ್ಬಿಟ್ಟೆ ಅಂದಿದ್ದಾನೆ.ಬಸವ ಆಮೇಲೆ ಒಂದು ವಾರ ಹಾಸಿಗೆ ಬಿಟ್ಟು ಮೇಲೇಳಲೇ ಇಲ್ಲ.

5.

ಹನ್ನೆರಡು ಗಂಟೆ ರಾತ್ರಿ.ನಾನು ಮತ್ತು ನೀನು ಇಬ್ಬರೂ ಒಂದು ರೂಮಿನಲ್ಲಿ ಮಾತಾಡ್ತಾ ಕುಳಿತಿರ್ತೀವಿ.ಸಡನ್ನಾಗಿ ಲ್ಯಾಂಡ್ಲೈನ್ ಬಡಕೊಳ್ಳುತ್ತೆ. ನೀನು ಒಂದ್ ನಿಮಿಷ ಇರು ಬಂದೆ ಅಂತ ಎದ್ದು ಹೋಗಿ ಫೋನ್ ಅಟೆಂಡ್ ಮಾಡ್ತೀಯ.ಆದ್ರೆ ಆ ಕಡೆಯಿಂದ ಫೋನ್ ಮಾಡಿದೋನು ನಾನು ಕಳೆದ ರಾತ್ರಿಯೇ ಸತ್ತುಹೋಗಿದೀನಿ ಅಂತ ನಿನಗೆ ತಿಳಿಸ್ತಾನೆ.

ನೀನು ಮತ್ತೆ ರೂಮಿಗೆ ಬರ್ತೀಯಾ?

6.

ಅವತ್ತು ಕರೆಂಟ್ ಹೋಗಿರುತ್ತೆ. ರೂಮಿನ ತುಂಬಾ ಬರೀ ಕತ್ತಲು. ಬರೀಬೇಕು ಅಂತ ಪೆನ್ನು ಹಿಡಿದು ಕುಳಿತಿದ್ದ ನೀವು ಛೇ ಅಂತ ಕೆಇಬಿಯವರನ್ನ ಬೈಯ್ಕೊಂಡ್ ಬೆಂಕಿ ಪೊಟ್ಟಣ ಹುಡುಕೋದಕ್ಕೆ ಶುರು ಮಾಡ್ತೀರಾ.ಹಾಗೆ ಹುಡುಕ್ತಾ ಇರುವಾಗಲೇ ಬೆಂಕಿ ಪೊಟ್ಟಣವೊಂದನ್ನ ನಿಮ್ಮ ಕೈಗೆ ಯಾರೋ ಕೊಟ್ಟಂಗಾಗುತ್ತೆ.ಮನೆಯಲ್ಲಿ ಇದ್ದೋರು ನೀವೊಬ್ರೇ ಅಲ್ವಾ?ಹಾಗಾದ್ರೆ ಬೆಂಕಿ ಪೊಟ್ಟಣ ಕೊಟ್ಟೋರು?

Thursday, August 21, 2008

ಒಮ್ಮೆ ಬಂದು ಹೋಗೆ!



ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಆ ಎತ್ತರದ ಬೆಟ್ಟಗಳಲ್ಲಿ

ಅದ ಸುತ್ತುವ ನದಿಗಳಲ್ಲಿ

ಗಿರಗಿರನೆ ಸುತ್ತಾಡಿಕೊಂಡು

ಸುಖಾ ಸುಮ್ಮನೆ ಬದುಕಿದ್ದವ


ಮಗನಿಗೆ ಮೀಸೆ ಬಂತು ಅಂತ

ಹೆಮ್ಮೆ ಪಡ್ತಿದ್ದ ಅವ್ವ

ಮೊಲೆ ಬಂದ ಹೆಣ್ಣು ಮಕ್ಕಳು ಮಾತಾಡಿಸಿದ್ರೆ

ಉರಿದು ಬೀಳುತ್ತಿದ್ದಳು

ಹುಡುಗ ಚೆನ್ನಾಗವನೇ ಕಣ್ರೆ ಬಿನ್ನಾಣಗಿತ್ತೀರಾ

ಹಾರಿಸ್ಕೊಂಡು ಹೋಗ್ಗೀಗ್ ಬಿಟ್ಟಿರಾ?

ಊರ ಬಾಗಿಲಿಗೆ ತೋರಣ ಕಟ್ಟುಬಿಟ್ಟೇನು ಅಂತಿದ್ಳು.


ನಾನೋ ಮಹಾ ಯಬರ

ಹುಡುಗೀರ ಮೊಲೆ

ಕಂಡೋರ ಮನೆ ತೊಲೆ

ಯಾವುದಕ್ಕೂ ಕಣ್ಣಾಕದವ
***


ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಅಂತ ಸುಮ್ಮನಿದ್ದ ಒಂದಿನ

ಯಾರೋ ಸುಳಿದಂಗಾಯ್ತು

ಕೂಗಿದಂಗಾಯ್ತು

ಕೈ ಹಿಡಿದು ಜಗ್ಗಿದಂಗಾಯ್ತು

ಕಣ್ಣ ಕದ ತೆರೆದು ಬಂದು ಕುಳಿತಂಗಾಯ್ತು

ಎದೆಯ ಮಿದುವಿಗೆ

ಬೆರಳ ತಾಕಿಸಿ ಮೀಟಿದಂಗಾಯ್ತು

ಮನಸು ನನ್ನ ಮಾತೇ ಕೇಳಲಿಲ್ಲ

ಬಂದ ಕನಸುಗಳಿಗೆ ಲೆಕ್ಕವಿಲ್ಲ

ಹರವಿಕೊಂಡ ಆಕಾಶದ ತುಂಬಾ

ನಿನ್ನದೇ ಬಿಂಬ

ಹಾಡಬೇಕೆಂದು ಕುಳಿತವನ ಕೊರಳಲ್ಲಿ

ನಿನ್ನದೇ ಹೆಸರು

ಪ್ರಿಯೆ ಪ್ರಿಯೆ ಪ್ರಿಯಂವದಾ


ಅರೆ ಅಷ್ಟು ಹುಡುಗಿಯರಲ್ಲಿ

ಇಷ್ಟವಾಗಲಿಲ್ಲವಲ್ಲ ಒಬ್ಬಳೂ

ಇವಳಲ್ಲೇನಿದೆ ಸೆಳೆತ

ನನ್ನ ಈ ಪರಿ ಸೆಳೆಯಲು


ಕಾರಣ ಹುಡುಕಿದೆ

ಕಾರಣ ನೀನೇ ಆಗಿರುವಾಗಲೂ!


ಇಷ್ಟಾಗುವ ಹೊತ್ತಿಗೆ

ನೀನು ಇಷ್ಟವಾಗಿದ್ದೆ

ಮತ್ತು...

***


ಮತ್ತೆ ಮಳೆ ಹುಯ್ಯುತಿದೆ

ನೆನಪು ಜೀಕುತ್ತಿದೆ


ಮೊದಲ ಮಾತು

ಮೊದಲ ಸ್ಪರ್ಶ

ಮೊದಲ ಗಿಫ್ಟು

ಮೊದಮೊದಲ ಕಚಗುಳಿ

ಮೊದಲು ಕೊಟ್ಟ ಮುತ್ತು

ಮತ್ತು ಮುತ್ತು

ನೆನಪಿದೆಯಾ ನಿನಗೆ


ತಡವಾಗಿ ಬಂದಿದ್ದು

ನೀನು ಬೈದಿದ್ದು

ಬರ್ತಡೇಗೆ ವಿಷ್ ಮಾಡಿಲ್ಲ ಅಂತ

ಮುನಿಸಿಕೊಂಡಿದ್ದು

ಕೊಟ್ಟ ಗಿಫ್ಟ್ ಗಿಫ್ಟೇ ಅಲ್ಲ

ಅಂತ ವಾದಿಸಿದ್ದು

ನಾಳೆ ಕಡುಗೆಂಪು ಬಣ್ಣದ ಸೀರೆ ಉಟ್ಕೊಂಡ್ ಬಾರೆ ಅಂದ್ರೆ

ಮುಗಿಲು ಬಣ್ಣದ ಜೀನ್ಟ್ ತೊಟ್ಟು

ಪೇಚಾಡಿದ್ದು

ಪರಮ ಪೋಲೀ ಜೋಕಿಗೆ ನಕ್ಕಿದ್ದು

ಕಾನರ್ೆಟ್ಟೋ ಐಸ್ಕ್ರೀಮ್ ನೆಕ್ಕಿದ್ದು

ಸಂಜೆ ಸಿಗುತ್ತೀನಿ ಅಂತ ಅಣ್ಣಮ್ಮನ ದೇವಸ್ಥಾನದ ಬಳಿ

ಕಾಯಿಸಿದ್ದು


ಪ್ರೀತಿ ಕಾಯಿಸುತ್ತದೆ

ಮತ್ತು ಸತಾಯಿಸುತ್ತದೆ

ಪ್ರೀತಿ ಸಾಯಿಸುತ್ತದಾ?

***

ನಾನು ಸುಮ್ಮನಿದ್ದವ

ಅಂದ್ರೆ, ಕೇವಲ ಸುಮ್ಮನೇ!


ಒಮ್ಮೆ ನಾ ಕೇಳಿದ್ದೆ

ನನ್ನದು ನದಿ ಪ್ರೀತಿ ಕಣೆ

ನಿನ್ನದು?

ಮುಗಿಲ ಪ್ರೀತೀನಾ? ಅಂತ.


ನೀನು ಉತ್ತರ ಹುಡುಕುತ್ತಲೇ ಹೋದೆ

ನಾನು ಪ್ರಶ್ನೆ ಹಾಕುತ್ತಲೇ ಹೋದೆ

ಕಾಲ ಬಡ್ಡೀಮಗಂದು

ಗೀಚಿ ಹೋದ ಭಾಷೆಗೆ ಅರ್ಥವೇ ಇರಲಿಲ್ಲ


ಜಗತ್ತು ಎಷ್ಟು ಕ್ರೂರಿ ಅಲ್ವಾ?

ಬದುಕು ಇನ್ನೇನು ಬಿಚ್ಚಿಕೊಳ್ತು ಅನ್ನುವಾಗಲೇ

ಮುಚ್ಚಿಹೋಗುತ್ತದೆ

ಮುಕ್ತ ಮುಗಿಲಿಗೂ

ಮೋಡ ಆವರಿಸಿಕೊಳ್ಳುತ್ತದೆ


ನಿಜ್ಜ ಹೇಳ್ತೀನಿ

ನಾನು ನಿನ್ನನ್ಯಾವತ್ತೂ ಕಾಮಿಸಿಲ್ಲ

ಕೇವಲ ಪ್ರೇಮಿಸಿದೆ

ಆರಾಧಿಸಿದೆ

ಎದೆಯಲ್ಲಿಟ್ಟುಕೊಂಡೆ

ಬೊಗಸೆಯಲ್ಲಿಟ್ಟರೆ ಕಳೆದುಹೋಗುತ್ತಿಯ ಅಂತ


ಪ್ರಿಯ ಪ್ರಿಯಂವದಾ


ಗೊತ್ತಾ

ಪ್ರೀತಿಗೆ ಸೋಲಬಹುದು ಕಣೆ

ಕಾಮಕ್ಕೆ ಸೋಲಬಾರದು


***

ಹಚ್ಚಿಟ್ಟ ಹಣತೆಗೆ ಎಣ್ಣೆಯಿಲ್ಲ

ಕಣ್ಣಲ್ಲಿ ಕಾಂತಿಯಿಲ್ಲ

ಎದೆಯ ಮಗ್ಗುಲಲ್ಲಿ ಮುಳ್ಳುಕಂಟಿ


ಬಾಗಿಲು ತೆರೆದೇ ಇದೆ

ಹೋಗಿದ್ದು ಯಾಕೆ ಅಂತ ಕೇಳೊಲ್ಲ

ನಾನೋ ಈಡಿಯಟ್ ಕಾಯುತ್ತಿದ್ದೇನೆ

ಒಮ್ಮೆ ಬಂದು ಹೋಗೆ.

Tuesday, August 5, 2008

ಪ್ರತಿ ಹುಡುಗಿಯ ಕನಸು, ನನಸು ಮತ್ತು ಈ ಮೊಗ್ಗಿನ ಮನಸು


ನನ್ನನ್ನ ನೀನು ಎಷ್ಟು ಇಷ್ಟ ಪಡ್ತೀಯ?

ನೀನು ನಿನ್ನನ್ನ ಎಷ್ಟು ಇಷ್ಟ ಪಡ್ತೀಯೋ ಅಷ್ಟು.

ಹುಡುಗಿ ಕಣ್ಣಲ್ಲಿ ಭರವಸೆಯ ಬೆಳಕು ಫಳ್ ಅನ್ನುತ್ತದೆ.

ಅದಾದ ಮೇಲೆ ಒಂದಿನ ಬಂದವಳೇ ನನ್ನನ್ನು ಮರೆತುಬಿಡು ಅಂದುಬಿಡುತ್ತಾಳೆ.ಹಾಗೆಲ್ಲ ಮರೆಯೋದಕ್ಕೆ ಸಾಧ್ಯಾನಾ? ಏನಾಗಿದೆ ನಿನಗೆ? ಅನ್ನುತ್ತಾನೆ ಹುಡುಗ. ನನ್ನನ್ನ ಏನೂ ಕೇಳಬೇಡ, ಏನೂ ಹೇಳಬೇಡ. ಜಸ್ಟ್ ಇಷ್ಟ ಇಲ್ಲ ಅಂದುಬಿಡುತ್ತಾಳೆ. ಹುಡುಗನಿಗೆ ಸಿಟ್ಟು ಬಂದು ನಿನ್ನನ್ನ ಕೊಂದಾಕಿಬಿಡ್ತೀನಿ ಅನ್ನುತ್ತಾನೆ. ಕೊಂದುಬಿಡು. ಇಲ್ಲ ನನ್ನನ್ನ ಮರೆತುಬಿಡು ಅನ್ನುತ್ತಾಳೆ ಹುಡುಗಿ ತಣ್ಣಗೆ. ಹುಡುಗ ಎರಡನ್ನು ಮಾಡುವುದಿಲ್ಲ. ಆದ ಶಾಕ್ನಿಂದ ಚೇತರಿಸಿಕೊಂಡು ತಿರುಗಿ ನೋಡುವಷ್ಟರಲ್ಲಿ ಅವಳು ಬಹಳ ದೂರ ನಡೆದುಬಿಟ್ಟಿರುತ್ತಾಳೆ. ಹೆಣ್ಣೆಂದ್ರೆ ಅಷ್ಟೊಂದು ನಿಭರ್ಾವುಕಾ ಮನಸ್ಸಾ? ಹುಡುಗರೆಂದ್ರೆ ಹೀಗೇನಾ?

ಮೊಗ್ಗಿನ ಮನಸ್ಸು ನೋಡಿ ಬಂದಾಗಿನಿಂದ ಮನಸ್ಸು ಒಂದೊಳ್ಳೆ ಸಿನೆಮಾ ನೋಡಿದ ಖುಷಿಗೆ ಬಿದ್ದಿದೆ. ಇಷ್ಟು ಕ್ಲಿಯರ್ ಆಗಿ, ಇಷ್ಟು ಲವಲವಿಕೆಯಿಂದ, ಅದೂ ಇಷ್ಟು ಚಂದಕ್ಕೆ ಒಂದು ಸಿನೆಮಾ ಮಾಡಲು ಸಾಧ್ಯಾನಾ? ನಿಜ ಹೇಳಬೇಕೆಂದ್ರೆ, ಇಂಥದ್ದೊಂದು ಪಿಚ್ಚರ್ ನೋಡಿಯೇ ಎಷ್ಟೋ ವರ್ಷಗಳಾಗಿತ್ತು. ಅಸಲಿಗೆ ಮೊಗ್ಗಿನ ಮನಸ್ಸಿನ ನಿಜವಾದ ಸ್ಟಫ್ ಏನು?ನಾಲ್ಕು ಹುಡುಗೀರು. ಮತ್ತವರ ಮನಸ್ಸು. ಆ ಮನಸ್ಸಿನ ಕಾಂಕ್ಷೆ, ಧಾವಂತ. ತಳಮಳ ಮತ್ತು ಕೊನೆಗೆ ಒಡೆದ ಹೃದಯದ ರೋದನ. ಚಿಕ್ಕ ಚಿಕ್ಕ ಖುಷಿಗಳಿವೆ. ಆ ಖುಷಿಯ ಮಗ್ಗುಲಲ್ಲೆ ಅಡಗಿದ್ದ ದುಃಖದ ಛಾಯೆಯೂ ಇದೆ. ಅಗಲಿಕೆಯ ಜೊತೆಗೆ ಮತ್ತೆ ಸೇರಿದ ಖುಷಿ ಕೂಡ ಇದೆ. ಅದಕ್ಕೆ ಅಬ್ಬರವಿದೆಯಾ ಅಂದ್ರೆ ನೋ. ಎಲ್ಲಾ ತಣ್ಣಗಿನದ್ದು.ಹಾಗೆ ನೋಡಿದ್ರೆ ಇಡೀ ಚಿತ್ರದಲ್ಲಿ ಎಲ್ಲೂ ಅಬ್ಬರವಿಲ್ಲ. ಫೈಟ್ ಇಲ್ಲ. ತುಂಬಾ ಎಮೋಷನಲ್ ಅನ್ನುವ ಶಾಟ್ಸ್ಗಳಿಲ್ಲ. ಅಳುಮುಂಜೀ ಪಾತ್ರಗಳಿಲ್ಲ. ಆದರೂ ಕಣ್ಣು ಅಲ್ಲಲ್ಲಿ ಒದ್ದೆಯಾಗುತ್ತದೆ. ಹೀಗೆ ನನಗೂ ಆಗಿತ್ತಲ್ವಾ ಅಂತ ಹುಡುಗಿಯ ಮನಸ್ಸು ದಿಗ್ಗನೆದ್ದು ಕುಳಿತು ಕಾಡುತ್ತದೆ. ತೀರಾ ಘಾಸಿಗೊಂಡ ಮನಸ್ಸನ್ನಿಟ್ಟುಕೊಂಡು ಬಂದು ಅಮ್ಮನ ತೊಡೆಯ ಮೇಲೆ ಮಲಗಿ ಒಳಗೊಳಗೇ ದುಃಖಿಸುವ ಹುಡುಗಿಯ ಮನಸ್ಸು ನನ್ನದೂ ಏನೋ ಅನ್ನಿಸುವಷ್ಟು ಆಪ್ತವೆನಿಸಿಬಿಡುತ್ತದೆ. ಪ್ರೀತಿಸಿದ್ದು ತಪ್ಪಾ? ಪ್ರೀತಿಸಿದ ಮೇಲೆ ಕಾಮಿಸಿದ್ದು ತಪ್ಪಾ? ಯಾರು ಸರಿ? ಯಾರು ತಪ್ಪು? ಹುಡುಗರೆಂದ್ರೆ ಹೀಗೇನಾ? ಅಥವಾ ಹುಡುಗಿಯರೆಂದ್ರೆ ಹೀಗೀಗೇನಾ? ಪ್ರೀತಿ ನಂಬಿಕೆಯಾ, ಅಪನಂಬಿಕೆಯಾ? ಪ್ರೀತಿ ಸಾವಾ? ಗೆಲುವಾ? ಅವಕ್ಕೆಲ್ಲ ಪಾತ್ರಗಳೇ ಉತ್ತರ ಹೇಳುತ್ತಾ ಸುಮ್ಮನೆ ಎಲ್ಲವನ್ನೂ ಒಡಲಲ್ಲಿಟ್ಟುಕೊಂಡು ಸಾಗುವ ತಣ್ಣನೆಯ ನದಿಯ ಹಾಗೆ ಚಿತ್ರ ಸಾಗುತ್ತದೆ.

ಹೇಳಬೇಕೆಂದ್ರೆ, ಮೊಗ್ಗಿನ ಮನಸ್ಸು ಪ್ರತಿಯೊಂದು ಹುಡುಗಿಯ ಮನಸ್ಸಿನ ಕ್ಯಾನ್ವಾಸ್. ಮೊದಲ ಸಲ ಪಿಯುಸಿ ಮೆಟ್ಟಿಲು ಹತ್ತುವ ಹುಡುಗಿಯರ ಧಾವಂತದಿಂದ ಹಿಡಿದು ಕಡೆಗೆ ತಾನು ಜೀವ ಹೋಗುವಷ್ಟು ಪ್ರೀತಿಸುವ ಹುಡುಗನನ್ನು ನಿರಕರಿಸುವ ತನಕ ಕ್ಯಾನ್ವಾಸ್ ವಿಸ್ತಾರಗೊಂಡಿದೆ. ಮೊದಲ ಕ್ರಷ್, ಮೊದಲ ಸ್ಪರ್ಶ, ಮೊದಲ ಮಾತು ಹುಡುಗಿ ಪುಳಕಗೊಳ್ಳುತ್ತಾಳೆ. ಇಡೀ ಮೊಗ್ಗಿನ ಮನಸು ನಿಲ್ಲುವುದು ಅದರ ಲವಲವಿಕೆಯಲ್ಲಿ. ನಾಲ್ಕೂ ಹುಡುಗಿಯರ ಮನಸ್ಸಿನ ಭಾವಗಳು ಎಲ್ಲೋ ಒಂದು ಕಡೆ ಒಬ್ಬಳದೆ ಅನ್ನುವಷ್ಟು ಒಂದು ಫ್ರೇಮ್ಗೆ ಒಳಗಾದರೂ ಹಾಗೇ ನೋಡ ನೋಡುತ್ತಲೇ ಅವು ಪ್ರತಿಯೊಂದು ಹುಡುಗಿಯ ಮನಸಿನ ಭಾವನೆಗಳೂ ಆಗಿಬಿಡುವ ಸಾಧ್ಯತೆಯೇ ಹೆಚ್ಚು. ನಿನಗೋಸ್ಕರ ಜೀವ ಬೇಕಾದ್ರೆ ಕೊಡ್ತೇನೆ ಅಂತಿದ್ದ ಹುಡುಗನೇ ಸುರಿವ ಮಳೆಯಲ್ಲಿ ನಿಂತು ನೀನು ನಿನ್ನ ಫ್ರೆಂಡ್ಸ್ ಜೊತೆ ಹಾಗೆಲ್ಲ ಚೆಲ್ಲು ಚೆಲ್ಲಾಗಿ ನಗುವುದು ನನಗಿಷ್ಟ ಇಲ್ಲ ಅಂದುಬಿಡುತ್ತಾನೆ. ಅರೆ ನನ್ನನ್ನ ಪ್ರೀತಿಸುತ್ತಿರುವ ಹುಡುಗ ಇವನೇನಾ? ಅಂತ ಹುಡುಗಿಗೆ ಕ್ಷಣ ತಬ್ಬಿಬ್ಬಾಗುತ್ತದೆ. ಹಾಗೆಲ್ಲ ಅನ್ನಬೇಡ ಕಣೋ ಅಂತಾಳೆ. ಅವನು ನಿನಗೆ ನನಗಿಂತ ಅವರೇ ಹೆಚ್ಚಾ ಅಂತ ಹುಚ್ಚಾಡುತ್ತಾನೆ. ಡೋಂಟ್ ಟ್ರೀಟ್ ಲೈಕ್ ಅ ಪ್ರಾಪಟರ್ಿ ಅಂತ ಗದರಿ ಎದ್ದುಹೋಗಿಬಿಡುತ್ತಾಳೆ. ಪ್ರೀತಿ ನೆಗೆದು ಬೀಳುತ್ತದೆ. ಇಡೀ ಚಿತ್ರದಲ್ಲಿ ಪ್ರೀತಿ ಗೆಲ್ಲುವ, ಪ್ರೀತಿ ಸೋಲುವ ಮತ್ತೆ ಪ್ರೀತಿ ಗೆಲ್ಲುವ ಅನುಭೂತಿ ಇದೆ. ವಂಡರ್ಫುಲ್ ಅನ್ನಿಸುವ ಲೊಕೇಷನ್ಗಳಿವೆ. ಯಾಣವನ್ನ, ಬೇಕಲ್ ಫೋಟರ್್ ಅನ್ನ ಅಷ್ಟು ಅದ್ಭುತ ಅನ್ನಿಸುವಷ್ಟರ ಮಟ್ಟಿಗೆ ತೋರಿಸಿದ್ದಾರೆ. ಹಾಡುಗಳು ತೀರಾ ಮೆಲೊಡಿ ಅನ್ನುವಂತಿಲ್ಲವಾದರೂ ಓಕೆ.

ಅಷ್ಟೊಂದು ಚೆನ್ನಾಗಿ ಹುಡುಗಿಯರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಂಡಿರಿ ಅಂದ್ರೆ ಗೆಳೆಯ ಶಶಾಂಕ್, ಇದು ಸುಮ್ಮನೆ ಹೆಣೆದ ಕಥೆಯಲ್ಲ. ಪಕ್ಕಾ ರಿಯಲ್ ಇನ್ಸಿಡೆಂಟ್ಗಳನ್ನ ಸ್ಟಡಿ ಮಾಡಿದೀನಿ ಅಂತಾರೆ. ಅದಕ್ಕೆ ಅವರಿಗೆ ಪ್ರೇರಣೆಯೂ ಇದೆಯಂತೆ. ಹ್ಯಾಟ್ಸಾಫ್ ಟು ಯು ಶಶಾಂಕ್. ಹಾಗೆ ಇಂಥದ್ದೊಂದು ವಿಭಿನ್ನ ಚಿತ್ರಕ್ಕೆ ಹಣ ಹಾಕಿದ ಕೃಷ್ಣಪ್ಪನವರಿಗೂ ಒಂದು ಹ್ಯಾಟ್ಸಾಫ್. ಒಟ್ಟಿನಲ್ಲಿ ಮೊಗ್ಗಿನ ಮನಸು ಚಿತ್ರ ನೋಡಿ ಹೊರಬಂದ ಮೇಲೂ ಕಾಡುತ್ತದೆ. ಒಂದು ಚಿತ್ರ ಕಾಡಿತು ಅಂದ್ರೆ ಅದು ನಿಜಕ್ಕೂ ಗೆದ್ದಂತೆಯೇ. ಹಾಗಾಗಿ ಮೊಮ ಗೆದ್ದಿದೆ.ಬಿಡುವು ಮಾಡಿಕೊಂಡು ಒಮ್ಮೆ ಹೋಗಿ ಬನ್ನಿ. ಇಲ್ಲ ಅಂದ್ರೆ ಒಂದು ಒಳ್ಳೆ ಚಿತ್ರ ಖಂಡಿತಾ ಮಿಸ್ ಮಾಡಿಕೊಳ್ತೀರಿ.

Tuesday, July 29, 2008

ಪ್ರೇಮ ನಿವೇದನೆಗೊಂದು ಪಲ್ಲವಿ


ಮೆಲ್ಲ ಮೆಲ್ಲ ಮೆಲ್ಲುವ

ಸನ್ನೆಯಲ್ಲೆ ಕೊಲ್ಲುವ

ಸದ್ದೆ ಇರದ ಉತ್ಸವ

ಪ್ರೀತಿಯೊಂದೇ ಅಲ್ಲವಾ...

ಆಹಾ ಆಹಾ! ಎಂಥ ಸಾಲುಗಳು. ಅದ್ಯಾವ ಗಳಿಗೆಯಲ್ಲಿ ಕವಿ ಈ ಹಾಡು ಬರೆದನೋ, ಅದ್ಯಾವ ಗಳಿಗೆಯಲ್ಲಿ ನಾನು ಶ್ರದ್ಧೆಯಿಂದ ಕೇಳಿಸಿಕೊಂಡೆನೋ ಅವಾಗಿನಿಂದ ಅದರದೇ ಹುಚ್ಚು ಹಿಡಿದಿದೆ. ಹಾಡೊಂದು ಗುಂಗು ಹಿಡಿಸುತ್ತೇ ಅಂತಾರಲ್ಲ ಅದು ಇದೇ ಇರಬೇಕು. ಟೀವಿ ಹಾಕಿದ್ರೆ, ಕಾರ್ ಹತ್ತಿದ್ರೆ, ಎಫ್ ಎಂ ಹಾಕಿದ್ರೆ, ಹೊರಗೋದ್ರೆ ದೇವರೇ ಆ ಹಾಡು ಒಮ್ಮೆ ಕಿವಿಗೆ ಬೀಳಲೀ ಅಂತ ಮನಸ್ಸು ಕಾತರಿಸುತ್ತೆ. ಅಷ್ಟು ಇಂಪು. ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಕೂಡ ಕೆಲ ಕಾಲ ಹೀಗೆ ಗುಂಗು ಹಿಡಿಸಿತ್ತು. ಆಮೇಲೆ ಸೌಂದರ್ಯ ಚಿತ್ರದ ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಅನ್ನುವುದು ಇನ್ನಿಲ್ಲದೇ ಕಾಡಿತು. ಈಗ ನಿನ್ನ ನೋಡಲೆಂತೋ ... ಮಾತನಾಡಲೆಂತೋ... ಅನ್ನುವ ಪ್ರೇಮ ನಿವೇದನೆ.

ಈ ಹಾಡು ಮುಸ್ಸಂಜೆ ಮಾತು ಚಿತ್ರದ್ದು. ಟ್ಯೂನ್ ಕೂಡ ಚೆನ್ನಾಗಿದೆ. ಹಿತವಾಗಿದೆ ಅಂದ್ರೆ ಸರಿಹೋಗುತ್ತೇನೋ. ಬರೀ ಅಹಿತ ಗೀತೆಗಳೇ ಕಿವಿಗೆ ಬೀಳುತ್ತಿದ್ದಾಗ ರಾಮ್ ನಾರಾಯಣ್ ಗೀತೆ ರಚಿಸಿ ಶ್ರೀಧರ್ ಸಂಗೀತವಿರುವ ಇಂತಹ ಹಾಡು ಯಾಕೋ ಮನಕ್ಕೆ ಹತ್ತಿರವಾಗಿಬಿಡುತ್ತದೆ. ಭಾವ ಜೀಕುತ್ತದೆ. ಸೋನು ನಿಗಮ್ ಶ್ರೇಯ ಘೋಷಲ್ ದನಿ ಸೂಪರ್ಬ್.

ನನಗೆ ಈ ಹಾಡು ಬರೀವಾಗಲೇ ಇದು ಗ್ಯಾರಂಟಿ ಹಿಟ್ ಆಗುತ್ತೆ ಅನಿಸಿತ್ತು ಅಂತಾರೆ ರಾಮ್ ನಾರಾಯಣ್. ಅವರಿಗೊಂದು ಗುಡ್ಲಕ್ ಹೇಳೋಣ. ಹಾಗೆ ಶ್ರೀಧರ್ ಗೂ.

Saturday, July 26, 2008

ಮಾರ್ನಿಂಗ್ ದುನಿಯಾದಲ್ಲಿ ಸಿಕ್ಕ ಗೆಳೆಯನೂ ಮತ್ತವನ ಪ್ರೀತಿಯೂ


ಅವತ್ತು ಇಡೀ ರಾತ್ರಿ ಕಣ್ಣು ಮುಚ್ಚಿಲ್ಲ. ಸೀನಣ್ಣ ಸ್ವಲ್ಪ ಸಮಯ ಜೊತೆಲಿದ್ದು ಆಮೇಲೆ ಹಾಯ್ ಬೆಂಗಳೂರ್ ಪ್ರಿಂಟ್ ಇದ್ದದ್ದರಿಂದ ಅದರ ಉಸ್ತುವಾರಿಗೆ ಹೋದ. ಎದುರಿಗಿದ್ದ ಮೆಷೀನ್ ಸೆಕೆಂಡಿಗೆ ಮೂರು ಕಲರ್ ಷೀಟ್ ಉಗುಳುತಿತ್ತು. ಮಧ್ಯೆ ಮಧ್ಯೆ ಪ್ರಿಂಟರ್ಗೆ ನಂಗೊಂದು ಷೀಟ್ ಕೊಡಿ ಅಂತ ತೆಗೆದುಕೊಂಡು ಕಲರ್ ಸರಿಯಾಗಿದೆಯಾ ಅಂತ ನೋಡ ನೋಡುತ್ತಲೇ ಬೆಳಕು ಹರಿದಿತ್ತು. ಪ್ರಿಂಟರ್ ತಮಿಳುನಾಡಿನವನು. ಕನ್ನಡ ಮಾತಾಡಿದರೆ ಅದು ತಮಿಳೇ ಇದ್ದಂಗಿತ್ತು. ಸಾರ್ ಣೀವು ಹೋಗಿ ಮಳಗಿ. ನಣ್ಣ ಮೇಲೇ ಣಂಬಿಗೆ ಇಳ್ಳವಾ? ಅಂತ ಅವನು. ಇಲ್ಲಪ್ಪ ನನಗೆ ಅಭ್ಯಾಸ ಆಗಿಹೋಗಿದೆ. ಪರವಾಗಿಲ್ಲ ಇರ್ತೇನೆ ಅಂತ ಪಟ್ಟಾಗಿ ಅಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತುಬಿಟ್ಟೆ. ನನಗೆ ಹೀಗೆ ನಿದ್ರೆಗೆಡುವುದೆಲ್ಲ ಹೊಸದಲ್ಲ. ಮೈಸೂರಿನಲ್ಲಿದ್ದಾಗ ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಎಲ್ಲರೂ ತಮಿಳರೇ. ಹಾಗಾಗಿ ತಮಿಳಿನ ಗಂಧ ನನಗೆ ಸ್ವಲ್ಪ ಗೊತ್ತು. ಅವರು ಕೆಟ್ಟಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ರೆ (ಅಥವಾ ನಮಗೆ ಬೈದ್ರೆ) ನಾನು ಮೊದಮೊದಲು ಪೆಕರುಪೆಕರಾಗಿ ನೋಡುತ್ತಿದ್ದೆ. ಆಮೇಲೆ ಸ್ವಲ್ಪ ಹುಷಾರಾಗಿ ಆ ಬೈಗುಳದ ಅರ್ಥ ತಿಳಿದುಕೊಂಡೆ. ಆಗ ಗೊತ್ತಾಯ್ತು ಅವರು ಏನೆಲ್ಲ ಬೈದಾಡಿಕೊಳ್ಳುತ್ತಿದ್ದರೂ ಅಂತ. ಆಮೇಲಾಮೇಲೆ ನಾನೂ ಅವರನ್ನು ಅದೇ ಭಾಷೆಯಲ್ಲಿ ಬೈದಾಗ ಇವನಿಗೆ ತಮಿಳು ಕಲಿಸಿಕೊಟ್ಟಿದ್ದೇ ತಪ್ಪಾಯ್ತು ಅಂತ ಅವರು ಪೇಚಾಡಿಕೊಂಡಿದ್ದರು.ಇಂತಿಪ್ಪ ಪ್ರೆಸ್ನಲ್ಲಿ ನಾವು ಹೆಣ ಬಿದ್ದೋಗೋ ಹಂಗೆ ದುಡಿಯುತ್ತಿದ್ದೆವು. ನಿಜ ಹೇಳ್ತೀನಿ ಆ ಎರಡು ವರ್ಷದಲ್ಲಿ ನಾನು ದಿನಕ್ಕೆ ನಿದ್ರೆ ಅಂತ ಮಾಡುತ್ತಿದ್ದದ್ದು ಕೇವಲ ಮೂರೋ ನಾಲ್ಕೋ ಗಂಟೆ ಮಾತ್ರ. ರಾತ್ರಿ ಎಲ್ಲಾ ದುಡಿದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ ಅವರು ಸೈಕಲ್ ಹತ್ತಿ ಹೊರಟುಬಿಡುತ್ತಿದ್ದರು. ನಾನು ಅಲ್ಲೇ ಡಬ್ಬಲ್ ಡೆಮಿ ಪೇಪರ್ ಒಂದನ್ನು ಹಾಸಿಕೊಂಡು ಅಂತದೇ ಇನ್ನೊಂದನ್ನು ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದೆ. ಬೆಳಿಗ್ಗೆ ಹೋದ್ರೆ ಮನೆ, ಇಲ್ಲ ಅಂದ್ರೆ ಡ್ಯೂಟಿ ಕಂಟಿನ್ಯೂ ಆಗ್ತಿತ್ತು. ಆ ರಾತ್ರಿಗಳಲ್ಲೆ ನಾನು ಗೆಳೆಯ ಗೆಳತಿಯರಿಗೆ ಒಬ್ಬಂಟಿಯಾಗಿ ಕುಳಿತು ಪತ್ರ ಬರೆಯುತ್ತಿದ್ದದ್ದು. ಆಗ ನನಗಿದ್ದ ಬರವಣಿಗೆ ಅಂದ್ರೆ ಅದೊಂದೇ. ಪುಟಗಟ್ಟಲೇ ಪತ್ರ ಬರೆಯುವುದು ಅಭ್ಯಾಸವಾಗಿ ಹೋಗಿತ್ತು. ಯಾವುದಾವುದೋ ವಿಷಯ... ಏನೇನೋ ಚಚರ್ೆ, ಜೊತೆಗೊಂದಿಷ್ಟು ಗೆರೆಗಳು. ನಾನು ಬರೆವ ಪ್ರತಿ ಲೆಟರ್ನಲ್ಲೂ ಚಿತ್ರ ಇದ್ದೇ ಇರುತ್ತಿತ್ತು. ಅವನ್ನೆಲ್ಲ ಈಗಲೂ ನೆನೆದು ಪುಳಕಗೊಳ್ಳುತ್ತೇನೆ.ನಾವಿದ್ದ ಪ್ರೆಸ್ನಿಂದ ಕೂಗಳತೆ ದೂರದಲ್ಲಿ ದಾಸ್ಪ್ರಕಾಶ್ ಪ್ಯಾರಡೈಸ್ನವರದೊಂದು ಬೇಕರಿ ಇತ್ತು. ಅಲ್ಲಿ ದಿಲ್ಪಸಂದ್ ನೆನಸಿಕೊಂಡ್ರೆ ಈಗಲೂ ಬಾಯಲ್ಲಿ ನೀರೂರುತ್ತೆ. ಅಷ್ಟು ಚೆನ್ನಾಗಿರುತ್ತಿತ್ತು. ಅದನ್ನ ತಂದು ಮೇಯ್ತಿದ್ವಿ. ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ದಿನ ಇರ್ತಿತ್ತು. ಹಣದ್ದೇನು ಕೊರತೆ ಇರ್ತಿರಲಿಲ್ಲ. ಓಟಿ ಕೊಡ್ತಿದ್ರು. ತಿಂಡಿಗೂ ಕಾಸು ಕೊಡ್ತಿದ್ರಲ್ಲ! ಆಮೇಲೆ ರಾತ್ರಿಗೆ ಊಟಕ್ಕೆ ಅಂತ ಪರೋಟ ತಿಂತಿದ್ವಿ. ಅದೂ ಒಂಥರಾ ಮಜ್ಜಾ ಇರ್ತಿತ್ತು. ಪರೋಟ ತಂದು ಅದಕ್ಕೆ ಸಾಗು ಹಾಕ್ಕೊಂಡು ತಿನ್ನೋದು ಓಕೆ. ಆದ್ರೆ ಈ ತಮಿಳ್ನೋರು ನನಗೊಂದು ಹೊಸ ರುಚಿ ಹೇಳ್ಕೊಟ್ರು. ಪರೋಟಾನೆಲ್ಲ ಪೀಸ್ ಪೀಸ್ ಮಾಡಿ ಅದಕ್ಕೆ ಸಾಗು ಹಾಕಿ ಕಲಸಿ... ಜೊತೆಗೆ ಎರಡೋ ಮೂರೋ ಬಾಳೆ ಹಣ್ಣು ಹಾಕಿ ಕಲಸಿಕೊಳ್ಳೋದು. ಏನೋ ಒಂಥರ ರುಚಿ ಸಿಗ್ತಿತ್ತು. ಹಾಗೆ ಕಲಸಿಕೊಂಡು ಎರಡು ಪರೋಟ ತಿಂದುಬಿಟ್ರೆ ರಾತ್ರಿ ಇಡೀ ಹಸಿವು ಅನ್ನೋದು ಹತ್ತಿರಕ್ಕು ಸುಳಿಯುತ್ತಿರಲಿಲ್ಲ. ಆದ್ರ್ರೆ ಬೆಳಗಿನ ಜಾವ ಮೂರು ಗಂಟೆ ಆಗ್ತಾ ಇದ್ದ ಹಾಗೆ ಒಂದು ನಿದ್ರೆ ಬರ್ತಿತ್ತು ನೋಡಿ, ತಡೆಯೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋ ನಿದ್ರೆ ಅದು. ಒಮ್ಮೆ ತೂಕಡಿಸುತ್ತಲೇ ಪೇಪರ್ ಎಲ್ಲಾ ಸ್ಟೋರ್ ಆಗುತ್ತಲ್ಲ ಟ್ರೇ ಅದರೊಳಕ್ಕೇ ಕೈ ಹಾಕ್ಕೊಂಡು ಮಲಗಿಬಿಟ್ಟಿದ್ದೆ. ಪುಣ್ಯಕ್ಕೆ ಅಲ್ಲಿರುವವರು ಎಚ್ಚರಿಸಿದ್ದರು.ಇಂಥ ಪ್ರೆಸ್ನಿಂದ ಒಂದಿನ ಒಂದು ಮಾತೂ ಆಡದೇ ಎದ್ದು ಬಂದಿದ್ದೆ. ಆಗ ನಾನು ಅನುಭವಿಸಿದ ಡಿಪ್ರೆಷನ್ ಇದೆಯಲ್ಲ ಅದರಿಂದ ಪಾರಾಗಲು ನನಗೊಂದು ದಾರಿ ಬೇಕಿತ್ತು. ನನ್ನ ಬದುಕು ಕಟ್ಟಿಕೊಳ್ಳಲು ಒಂದು ಕನಸು ಬೇಕಿತ್ತು. ಅಂಥದ್ದೊಂದು ಕನಸಿನ ಬೆನ್ನು ಹತ್ತಿ ಬಂದವನಿಗೆ ಬೆಂಗಳೂರು ಬೇಡ ಅನ್ನಲಿಲ್ಲ.ಬದುಕು ನಿಧಾನಕ್ಕೆ ಬದಲಾಗತೊಡಗಿತು.ಯಾಕೋ ಹೋದ ವಾರ ಫಸ್ಟ್ ಹಾಫ್ ಮುದ್ರಣಕ್ಕೆ ಅಂತ ಪ್ರೆಸ್ಗೆ ಹೋದಾಗ ಇದೆಲ್ಲ ನೆನಪಾಗತೊಡಗಿತು.ಹಾಗೆ ರಾತ್ರಿ ಎಲ್ಲ ನಿದ್ರೆ ಗೆಟ್ಟು ಬೆಳಿಗ್ಗೆ ಮನೆಗೆ ಹೋಗಿ ಸ್ನಾನ ಮಾಡಿಬರೋಣ ಅಂತ ಹೊರಟೆ. ಕಾರು ಪ್ರೆಸ್ಸಲ್ಲೇ ಬಿಟ್ಟು ಹೋಗಿದ್ದೆನಾದ್ದರಿಂದ ಇಸ್ಕಾನ್ ಹತ್ತಿರ ಬಂದ ಆಟೋ ಒಂದಕ್ಕೆ ಕೈ ಅಡ್ಡ ಹಾಕಿದೆ.ನನ್ನ ಏರಿಯಾಗೆ ಬರ್ತೀಯಾ ಅಂದೆ.ನಾನಿದ್ದ ಡ್ರೆಸ್ ನೋಡಿಯೋ ಏನೋ, ಏನ್ ಸಾರ್ ಇಲ್ಲಿಗಂಟ. ಜಾಗಿಂಗ್ ಬಂದುಬಿಟ್ರಾ ಅಂತ ಆತ್ಮಿಯವಾಗಿ ಕೇಳಿದ. ಇಲ್ಲ ಇಲ್ಲ. ಪ್ರೆಸ್ಗೆ ಬಂದಿದ್ದೆ. ಈಗ ಮನೆಗೆ ಹೋಗತಾ ಇದೀನಿ ಅಂದೆ.ಪ್ರೆಸ್ನವರ ಸಾರ್. ಯಾವ ಪ್ರೆಸ್ಸು? ಅಂದ.ಹಾಯ್ ಬೆಂಗಳೂರ್ ಅಂದೆ.ಸಾರ್ ನಿಮ್ಮೆಸರು ಅಂದ.ರವಿ ಅಜ್ಜೀಪುರ ಅಂದೆ.ನಾನು ನಿಮ್ಮ ಫ್ಯಾನ್ ಸಾರ್. ನೀವು ಓ ಮನಸೇನಲ್ಲಿ ಬರೀತೀರಲ್ವಾ. ಸೂಪೆರ್ಬ್ ಅಂದ. ನನಗೆ ಇನ್ ಬಾಕ್ಸ್ ಅಂದ್ರೆ ಪ್ರಾಣ ಅಂದ. ನಾನು ನನ್ನ ಹುಡುಗಿಗೇ ಈ ಮೆಸ್ಸೇಜ್ಗಳನ್ನೇ ಕಳಿಸೋದು ಸಾರ್. ಅವಳಿಗೆ ತುಂಬಾ ಇಷ್ಟ ಅಂದ.ಹಾಗೆ ಮಾತಾಡ್ತಾ ಮಾತಾಡ್ತ ಮನೆ ಬಂದಿದ್ದೇ ಗೊತ್ತಾಗಲಿಲ್ಲ. ಹಣ ಕೊಡಲು ಹೋದ್ರೆ ಸರ್ ನಿಮ್ಮತ್ರ ಹಣಾನ, ಬೇಡ ಸಾರ್ ಅಂತ ಹಿಂಜರಿಯತೊಡಗಿದ.ಬಲವಂತ ಮಾಡಿ ಹಣ ಕೊಟ್ಟೆ.ಓ ಮನಸೇ ತುಂಬಾ ಲೇಟ್ ಮಾಡಬೇಡಿ ಸಾರ್. ನಮ್ಮಂತೋರು ಕಾಯ್ತಾ ಇರ್ತೀವಿ. ಮನೇಲಿ ಅದಿದ್ರೆ ದಾರಿ ದೀಪ ಇದ್ದಂಗೆ ಅಂದವನ ಕಣ್ಣಲ್ಲಿದ್ದ ಪ್ರೀತಿಗೆ ಏನು ಹೇಳಲಿ. ಎಲ್ಲಿಯವರೋ, ಯಾರೊ? ವಿನಾಕಾರಣ ನಮ್ಮನ್ನು ಪ್ರೀತಿಸಿಬಿಡುತ್ತಾರೆ. ಒಮ್ಮೊಮ್ಮೆ ಅಂಥ ಪ್ರೀತಿಗೆ ನಾವು ಅರ್ಹರೇ ಅನ್ನುವ ಪ್ರಶ್ನೆಯೂ ಎದ್ದು ದಿಗಿಲಾಗುತ್ತದೆ. ಇವೆಲ್ಲದರ ನಡುವೆ ಒಂದು ಒಳ್ಳೆ ಕೆಲಸ ಮಾಡಿದಾಗ ಆಗುವ ಖುಷಿ ಇದೆಯಲ್ಲ ಅದಕ್ಕೆ ಪಾರವೇ ಇಲ್ಲ. ಈಗ ಫಸ್ಟ್ ಹಾಫ್ ಕೈಯಲ್ಲಿದೆ. ಅದನ್ನು ನೋಡುತ್ತಾ ಕೂರುವುದರ ಸಂಭ್ರಮವೇ ಬೇರೆ ಬಿಡಿ.

Friday, July 25, 2008

ಗೆಳೆಯನಿಗೆ ಬಿಟ್ಟ ಒಂದು ಮೆಸ್ಸೇಜು...

ಒಂದು ವಿನಂತಿಯ ಹೊರತು ನಾನು ನಿನ್ನನ್ನೇನೂ ಕೇಳುವುದಿಲ್ಲಅಂದ ಹುಡುಗ.
ಹುಡುಗಿ ನಕ್ಕಳು.
ನಂತರ ಮಳೆ ಬಂತು.
ಮಳೆ ಬಿಸಿಲು ಬಂತು.
ಮುಗಿಲು ಶುಭ್ರವಾಯ್ತು.
ನೆಲ ಮಾತ್ರ ರಕ್ತಸಿಕ್ತವಾಗಿತ್ತು.
ಇದು ನಾನು ಭಾನುವಾರ ಗೆಳೆಯ ನವಿಲುಗರಿ ಸೋಮುವಿಗೆ ಕಳಿಸಿದ್ದ ಮೆಸ್ಸೇಜ್. ಅವತ್ತು ಹಾಸನದಿಂದ ಹಿಂದಿರುಗುತ್ತಿದ್ದೆ. ಯಾಕೋ ಏನೋ ಸುಮ್ಮನೆ ಕೂರಲು ಆಗದೇ ಒದ್ದಾಡುತ್ತಿದ್ದೆ. ಕುಣಿಗಲ್ ತಲಪುವಷ್ಟರಲ್ಲಿ ಚೂರೇ ಚೂರು ಮಳೆ ಬಂದು ಹಿತವೆನಿಸಿತು. ಕಿಟಕಿಯಲ್ಲಿ ತಲೆ ತೂರಿಸಿ ಆಹಾ ಅನ್ನಲು ಹೋದೆ. ಡ್ರೈವರ್ ರೀ ಸ್ವಾಮಿ ತಲೆ ಒಳಕ್ಕಾಕಳ್ರೀ, ಇಲ್ಲ ಅಂದ್ರೆ ತಲೇನೇ ಇರಲ್ಲ ಅಂದ. ಸರಕ್ಕನೆ ತಲೆ ಒಳಕ್ಕೆಳೆದುಕೊಂಡು ಕುಳಿತೆ. ಹೇಳಬೇಕೆಂದ್ರೆ ನನಗೆ ಈ ಪ್ರಯಾಣ ಯಾವಾಗಲೂ ಬೋರೇ! ಒಂಥರ ಆಯಾಸ ತಂದುಬಿಡುತ್ತೆ. ತೀರಾ ಹಸಿರು ಉಕ್ಕುವ ಪ್ರದೇಶಕ್ಕೆ ಹೋಗಿ ಬಂದರೆ ಮಾತ್ರ ಮನಸ್ಸು ಸ್ವಲ್ಪ ಉಲ್ಲಾಸದಿಂದಿರುತ್ತೇನೋ! ಆದ್ರೆ ಸುಮ್ಮನೆ ಯಾರದೋ ಮನೆಗೆ ಹೋಗಿ ತಿಂದುಂಡು ಮಲಗಿ ಮತ್ತೆ ಎದ್ದು ಹೊರಡುವುದಿದೆಯಲ್ಲ ಅದು ನಿಜಕ್ಕೂ ಬೇಜಾರಿನ ಕೆಲಸ. ನಾನು ಮಾಡಿದ್ದೂ ಅದನ್ನೇ! ಹಾಗಾಗಿ ಮನಸ್ಸಿನಲ್ಲಿ ಲವಲವಿಕೆಯೇ ಇರಲಿಲ್ಲ.
ಆಗ ಹೊಳೆದಿದ್ದೇ ಈ ಸಾಲುಗಳು.ತಕ್ಷಣ ನವಿಲುಗರಿ ಸೋಮುವಿಗೆ ಕಳಿಸಿಬಿಟ್ಟೆ. ಅವರಿಗೆ ಅದೇನು ಹಿಡಿಸಿತೋ ಮೂರು ದಿನ ಆದಮೇಲೆ ಒಂದು ಮೆಸ್ಸೇಜ್ ಬಿಟ್ಟರು. ನನಗೆ ನಿಜಕ್ಕೂ ಇದು ಹುಚ್ಚು ಹಿಡಿಸಿಬಿಟ್ಟಿದೆ. ಕೊನೆ ಸಾಲು ಮಾತ್ರ ಜಪ್ಪಯ್ಯ ಅಂದರೂ ಅರ್ಥ ಆಗಲಿಲ್ಲ. ಅದರಲ್ಲಿ ಏನೋ ಇದೆ ಅನಿಸುತ್ತಿದೆ. ಅದೇನು ಅಂತ ಹೇಳು ಗುರುವೇ ಅಂತ. ನಾನು ಅದುವರೆಗೂ ಆ ಮೆಸ್ಸೇಜ್ ಕಳಿಸಿ ಮರೆತು ಸುಮ್ಮನಿದ್ದವ. ಆದ್ರೆ ಯಾವಾಗ ಈ ನವಿಲುಗರಿ ಮತ್ತೆ ಕಳಿಸಿದರೋ ಮತ್ತೆ ಮತ್ತೆ ಓದಿಕೊಂಡೆ. ಹೌದಲ್ಲ ಇದರಲ್ಲೇನೋ ಇದೆ ಅನಿಸಿಬಿಟ್ಟಿತು. ಏನದು?ನಾನು ಹೇಳುವುದಕ್ಕಿಂತ ಅದನ್ನು ನೀವು ಹೇಳಿದ್ರೇ ಚೆನ್ನ. ಏನನ್ನಿಸಿತು ಅಂತ ಒಂದು ಮೆಸ್ಸೇಜ್ ಬಿಡಿ.
ಮನಸ್ಸು ಖುಲ್ಲಂ ಖುಲ್ಲ ಖುಷಿಯಾಗುತ್ತದೆ.

Wednesday, July 23, 2008

ಫಸ್ಟ್ ಹಾಫ್ ನೋಡಬೇಕು ಅಂದಿದ್ರು ವ್ಯಾಸರು

ಆಗತಾನೆ ಬಂದಿದ್ದ "ಫಸ್ಟ್ ಹಾಫ್" ಪುಸ್ತಕವನ್ನ ಪತ್ರಕರ್ತ ಗೆಳೆಯ ಶ್ರೀಕಂಠ ಒಂದು ಎಕ್ಸೈಟ್ಮೆಂಟ್ನೊಂದಿಗೆ ತಿರುವಿ ಹಾಕುತ್ತಿದ್ದರು. ಆ ಪುಸ್ತಕದ ಬಗ್ಗೆ ನನಗಿಂತ ಅವರಿಗೇ ಹೆಚ್ಚು ಕುತೂಹಲವಿತ್ತು. ಹಾಗಾಗಿ ಪುಸ್ತಕದ ಮೊದಲ ಕಾಪಿ ಬಂತು ಅನ್ನುತ್ತಿದ್ದಂತೆ ನನಗೆ ತೋರಿಸಿಯೇ ನೀವು ಹೋಗಬೇಕು ಅಂತ ಹಟ ಹಿಡಿದಿದ್ದರು. ಇಡೀ ಪುಸ್ತಕ ನೋಡಿ ಆದ ಮೇಲೆ ಅವರು ಹೇಳಿದ್ದಿಷ್ಟು... ಈ ತರಹದ ಪುಸ್ತಕ ಇದುವರೆಗೂ ಬಂದಿಲ್ಲ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ ಅಂತ. ಅವರ ಪ್ರೀತಿ ದೊಡ್ಡದು.
ಆದರೆ ವಿಪಯರ್ಾಸ ನೋಡಿ. ವ್ಯಾಸರು ರವಿ ಬೆಳಗೆರೆ ಬಗ್ಗೆ ಅತ್ಯಂತ ಪ್ರೀತಿಯಿಂದ ಬರೆದುಕೊಟ್ಟಿದ್ದ ಲೇಖನವನ್ನ ತಿರುವಿಹಾಕುತ್ತಿದ್ದಾಗಲೇ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂತು. ಮಧ್ಯಾಹ್ನ 12.20ಕ್ಕಷ್ಟೇ ಫೋನ್ ಮಾಡಿ ವಿಠ್ಠಲ ಗಟ್ಟಿ ಉಳಿಯ ಅವರ ಜೊತೆ ನಗುನಗುತ್ತಾ ಮಾತಾಡಿದ್ದರು. ನಮ್ಮನ್ನೆಲ್ಲ ಯಥಾಪ್ರಕಾರ ವಿಚಾರಿಸಿದ್ದರು. ಓ ಮನಸೇ ಬೇಗ ಕೊಡಿ. ಯಾಕೆ ಲೇಟ್ ಮಾಡ್ತೀರಿ ಅಂದಿದ್ದರು. ನಾನು ಫಸ್ಟ್ ಹಾಫ್ ಪುಸ್ತಕದ ರಿಲೀಸಿಂಗ್ ಫಂಕ್ಷನ್ಗೆ ಬರ್ತೇನೆ ಅಂದಿದ್ದರಂತೆ. ಇನ್ನೆಲ್ಲಿ ಬರೋದು? ಯಾಕೋ ಗೊತ್ತಿಲ್ಲ ಹಿರಿಯರೆನಿಸಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಹೇಳದೆ ಕೇಳದೆ ಹೊರಟುಹೋಗುತ್ತಿದ್ದಾರೆ. ನನ್ನ ಅತ್ಯಂತ ಪ್ರೀತಿಯ ರಾಮ್ದಾಸ್ ಹೋದಾಗಲಂತೂ ನನ್ನನ್ನೊಂದು ಶೂನ್ಯ ಆವರಿಸಿಕೊಂಡಿತ್ತು. ಮೊನ್ನೆ ಅವರ ಕೊನೆಯ ಫೋಟೋ ಆಕಸ್ಮಿಕವಾಗಿ ಸಿಕ್ಕಿತು. ಕಣ್ಣು ಒತ್ತರಿಸಿಕೊಂಡು ಬಂತು. ಒಮ್ಮೆ ಮೂಡುಬಿದಿರೆಯಲ್ಲಿ ಸಿಕ್ಕು ಇಷ್ಟು ಎತ್ತರ ಬೆಳೆದುಬಿಟ್ಟಿದ್ದೀರಾ? ಗುರುತೇ ಸಿಗುತ್ತಿಲ್ಲ ಅಂದಿದ್ದರು. ಆಮೇಲೆ ಅದೆಂಥದೋ ಮರದ ಕೆಳಗೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದಿದ್ದರು. ಹಾಗೆ ತೇಜಸ್ವಿ. ಈಗ ವ್ಯಾಸರು. ನಾವೆಲ್ಲ ಸಾಹಿತ್ಯಕ ತಬ್ಬಲಿಗಳಾಗುತ್ತಿದ್ದೀವೇನೋ ಅನಿಸಿಬಿಟ್ಟಿದೆ.ಗೆಳೆಯ ವಿಠ್ಠಲ ಗಟ್ಟಿ ಉಳಿಯ ಅವರಿಗೆ ವ್ಯಾಸರು ಫೋನ್ ಮಾಡಿದಾಗಲೆಲ್ಲ ರವಿ ಅಜ್ಜೀಪುರ ಅವರನ್ನು ಕೇಳಿದೆ ಅಂತ ಹೇಳಿ. ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಶೈಲಿ ಚೆನ್ನಾಗಿದೆ ಅನ್ನುತ್ತಿದ್ದರಂತೆ. ಪ್ರತಿ ಮೆಸ್ಸೇಜ್ನಲ್ಲೂ ನಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ರು. ಒಮ್ಮೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ನಾನು ವಿಠ್ಠಲಗಟಿ ಉಳಿಯ ಮಾತಾಡಿಕೊಂಡಿದ್ದೆವು. ಅವರಿಗೆ ಫಸ್ಟ್ ಹಾಫ್ ಪುಸ್ತಕ ನೋಡಬೇಕೆಂಬ ಆಸೆ ತೀವ್ರವಾಗಿತ್ತು. ಆದ್ರೆ ಅದನ್ನು ನೋಡುವ ಮೋದಲೇ ಹೊರಟುಬಿಟ್ಟರಲ್ಲ ಅನ್ನುವ ವ್ಯಥೆ ಇನ್ನಿಲ್ಲದೇ ಕಾಡುತ್ತಿದೆ.
ಅವರ ಪ್ರೀತಿ ಅಜರಾಮರ. ಅವರು ಬರೆದ ಕಥೆಗಳೂ

Monday, July 21, 2008

ಫಸ್ಟ್ ಹಾಫ್ ಅನ್ನೋ ಬೆಳಗೆರೆ ಬದುಕಿನ ಬೆರಗು




ಫಸ್ಟ್ ಹಾಫ್.


ಫಸ್ಟ್ ಹಾಫ್ಇದೇನು ಹೆಸರೇ ಡಿಫರೆಂಟ್ ಆಗಿದೆ ಅಂದುಕೊಂಡ್ರಾ! ಹೆಸರು ಮಾತ್ರವಲ್ಲ ಬುಕ್ಕೂ ಡಿಫರೆಂಟಾಗೆ ಇದೆ.ನಾಲ್ಕುನೂರಕ್ಕೂ ಹೆಚ್ಚಿನ ಫೊಟೋಗಳು.... ಎಪ್ಪತ್ತಕ್ಕೂ ಹೆಚ್ಚಿನ ಆಪ್ತ ಬರಹಗಳು... ಸೊಗಸಾದ ವಿನ್ಯಾಸ... ಬೊಗಸೆಯಲ್ಲಿ ಬಿದ್ದೊಡನೆಯೇ ಬೆರಗುಗೊಳಿಸುವಂತಹ ಮುದ್ದುಮುದ್ದಾದ ಪುಸ್ತಕ ಇದು. ನಿಜ್ಜ ಇದು ರವಿ ಬೆಳಗೆರೆ ಅಭಿನಂದನಾ ಗ್ರಂಥ. ಅವರನ್ನು ಕಣ್ಣಲ್ಲಿ ತುಂಬಿಕೊಂಡವರು... ಮನದಲ್ಲಿ ಬಚ್ಚಿಟ್ಟುಕೊಂಡವರು ...ಹೇಗಿದ್ದ ಹೇಗಾದ ಅಂತ ಬೆರಗುಗೊಂಡವರು... ಬಹಳ ಕಷ್ಟಪಟ್ಟಾಂನ್ರಿ. ಅಂವ ಇನ್ನೂ ಚೆನ್ನಾಗಿರಬೇಕು ಅಂತ ಮನ ಬಿಚ್ಚಿ ಹರಸಿದವರು... ಕೈ ಹಿಡಿದು ನಡೆಸಿದವರು...ಗೆಳೆಯರು-ಗೆಳತಿಯರು... ಅವರ ನೆರಳಲ್ಲೇ ಬದುಕು ಕಂಡುಕೊಂಡವರು... ಎಲ್ಲರ ಮನದ ಮಾತು ಇಲ್ಲಿದೆ.


ಪ್ರತಿ ಪುಟವೂ ನವನವೀನ ಅಂತಾರಲ್ಲ ಹಾಗೇ.


ನಿಜ್ಜ ಹೇಳ್ತೀನಿ ಇಂಥ ಚಂದಕ್ಕೆ ಕನ್ನಡದಲ್ಲಿ ಈ ಮೊದಲು ಪುಸ್ತಕ ಬಂದಿದೆಯಾ?ಗೊತ್ತಿಲ್ಲ.ಆದ್ರೆ ಫಸ್ಟ್ ಹಾಫ್ ನ ಫಸ್ಟ್ ಕಾಪಿ ಬಂತಲ್ಲ ಅದನ್ನ ಕೈಯಲ್ಲಿಡಿದುಕೊಂಡು ಅದೆಷ್ಟು ಹೊತ್ತು ನೋಡುತ್ತಾ ಕುಳಿತೆನೋ..ನೋಡಿದಷ್ಟೂ ಬೆರಗು ತಣಿಯಲಿಲ್ಲ...


ಆ ಬೆರಗು ಇನ್ನೇನು ಕೆಲವೇ ದಿನಗಳಲ್ಲಿ ನಿಮಗೂ ಸಿಗಲಿದೆ...

Saturday, July 5, 2008

Tuesday, July 1, 2008

ಹೇಗೆ ಸಾಯಲಿ ಮತ್ತೆ?

ಹೇಗೆ ಸಾಯಲಿ ಮತ್ತೆ?
ನಿನಗಾಗಿ

ಆ ತಿರುವಿನಲ್ಲಿ ಕಾದೂ ಕಾದೂ
ಸತ್ತಿದ್ದು
ಕುಡಿ ನೋಟಕ್ಕಾಗಿ ಸತ್ತಿದ್ದು
ಪಿಸು ಮಾತಿಗಾಗಿ ಸತ್ತಿದ್ದು
ತಿರುಗಿ ನೋಡಬಾರದಾಂತ ಸತ್ತಿದ್ದು
ಸಿಗುತ್ತಾಳೋ ಇಲ್ಲವೋ ಅಂತ ಚಡಪಡಿಸಿ
ಸತ್ತಿದ್ದು
ರಾತ್ರಿ ನಕ್ಷತ್ರ ಎಣಿಸಿ ಸತ್ತಿದ್ದು
ಸತ್ತ ಸಂಜೆಗಳಲ್ಲಿ ಮತ್ತೆ ಸತ್ತಿದ್ದು
ನಿನ್ನ ನೆನಪುಗಳಿಗೆ ನೇಣುಹಾಕಿಕೊಂಡಿದ್ದು

ಹೇಳು
ಹೇಗೆ ಸಾಯಲೀ ಮತ್ತೆ?

ನೀನು ಸಿಕ್ಕಿದ ಮೇಲೂ
ಸಾಯುವುದು ನಿಲ್ಲಲಿಲ್ಲ

ಮಾತಲ್ಲಿ ಕೊಂದೆ
ಮೌನದಲ್ಲಿ ಕೊಂದೆ
ಕಣ್ಣಲ್ಲಿ ಕೊಂದೆ
ಬೆರಳ ತುದಿಯಲ್ಲಿ ಕೊಂದೆ
ಅನುಮಾನದಿ ಕೊಂದೆ
ಬಿಗುಮಾನದಿ ಕೊಂದೆ
ಕೊಂದೆ

ಎದೆಯ ಒಳಗಿನಭಾವ ಎಳೆದೆಳೆದು ಕೊಂದೆ
ಕನಸುಗಳನ್ನೆಲ್ಲ ಬರಸೆಳೆದು ಕೊಂದೆ
ನೀಲಾಕಾಶದ ತಳದಲಿ ನಿಂದವನ
ನಿಂದಿಸಿ ಕೊಂದೆ

ಹೇಳು
ಹೇಗೆ ಸಾಯಲಿ ಮತ್ತೆ?

ನಿನ್ನದೊಂದು ಕಣ್ಣ ಕುಡಿ
ನನ್ನ ಎದೆಯ ಕಡಲಲಿ ಜೀಕುವ ತನಕ
ನಾನು ಸತ್ತವನಲ್ಲ

ಪ್ರೀತಿಸುವುದೆಂದ್ರೆ
ಸಾಯುವುದಾ?
ಸಾಯಿಸುವುದಾ?

Friday, June 13, 2008

ಫಿಫ್ಟಿ ಫಿಫ್ಟಿ


ಯಾಕೋ ಗೊತ್ತಿಲ್ಲ ಮೊದಲ ನೋಟಕ್ಕೇ ಕೆಲವು ಹುಡುಗೀರು ಇಷ್ಟವಾಗಿ ಬಿಡುತ್ತಾರಲ್ಲ ಹಾಗೆ ಈ ಮರ ಕೂಡ ನನಗೆ ಇಷ್ಟ ಆಯ್ತು. ನನಗೆ ಅರ್ಥವಾಗಿದ್ದಕ್ಕೆ ಫಿಫ್ಟಿ ಫಿಫ್ಟಿ ಅಂತ ಹೆಸರಿಟ್ಟೆ. ನಿಮಗೆ ಏನನ್ನಿಸುತ್ತದೋ ಬಲ್ಲವರಾರು. ಮೂರ್ತವೂ ಆಗಬಹುದು ಅದೇ ಅಮೂರ್ತವೂ ಆಗಬಹುದು. ಅಥವಾ ಎದೆಯ ಭಾವಕ್ಕೇ ಸಿಗದೇ ಹೋಗಬಹುದು. ಹೇಗೋ ಹಾಗೇ!
ನಿಮಗೆ ಬಿಟ್ಟಿದ್ದೇನೆ.

ಪಾಳುಬಾವಿ ಬಳಿಯ ಕಾಲುದಾರಿಯಲ್ಲಿನ ಒಂದು ನೆನಪು


ನನಗಿನ್ನೂ ಅದು ನೆನಪಿದೆ.

ನಾವು ಸ್ಕೂಲಿಗೆ ಹೋಗುವಾಗ ಬರುವಾಗ ನಡುವೆ ಒಂದು ಬಾವಿ ಸಿಗುತ್ತಿತ್ತು. ಅದನ್ನೇನು ಯಾರೂ ಉಪಯೋಗಿಸ್ತಿರಲಿಲ್ಲ. ಪಾಳು ಬಾವಿ ಅಂತಾರಲ್ಲ ಆ ಥರದ್ದು. ಅದನ್ನ ದೆವ್ವದ ಬಾವಿ ಅಂತಾಲೂ ಕರೀತಿದ್ರು. ಅದರ ಎದೆ ಮೇಲೆ ಅಮಟೆ ಕಾಯಿ ಮರ... ನೇರಳೇ ಮರ... ಹೊಂಗೆ ಮರಗಳೆಲ್ಲ ಇದ್ವು. ಮೇನ್ ರೋಡ್ ಬಿಟ್ರೆ ಶಾಟರ್್ ಕಟ್ ಅಂತ ಬಹುತೇಕ ಮಂದಿ ಹೋಗುತ್ತಿದ್ದದು ಇದೇ ದಾರಿಯಲ್ಲಿ. ಹಾಗೇ ಹೋಗ್ತಾ ಬರ್ತಾ ಅಮಟೆ ಕಾಯಿ ಕಿತ್ಕೊಂಡು ಅದಕ್ಕೆ ಉಪ್ಪು ಕಾರ ಅದ್ಕಂಡು ತಿನ್ನೊ ಮಜಾ ಇದೆಯಲ್ಲ ಅದಕ್ಕೆ ಇವತ್ತಿನ ಯಾವ ತಿಂಡಿಯು ಸಮವಲ್ಲ ಬಿಡಿ. ಹುಣಸೇ ಹಣ್ಣಿಗೆ ಉಪ್ಪು ಕಾರ ಬೆರೆಸಿ ಅದನ್ನ ಉಂಡೆ ಮಾಡಿ ಕಡ್ಡಿಗೆ ಸಿಕ್ಕಿಸಿಕೊಂಡು ಚೂರು ಚೂರೇ ಚೂರು ಚೂರೇ ತಿಂತಾ ಇದ್ವಲ್ಲ ಅದ್ನ ಇವತ್ತಿನ ಯಾವ ಲಾಲಿಪಪ್ ತಿಂದ್ರೆ ಸಿಗುತ್ತೆ? ಉರುಳಿಯನ್ನ ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿ ಹಾಕಿ ಕುಟ್ಟಿ ಅವ್ವ ಮುದ್ದೆ ಗಾತ್ರ ಉಂಡೆ ಮಾಡಿ ಕೈ ತುಂಬಾ ಇಟ್ರೆ ಅದನ್ನ ತಿಂದಿದ್ದೇ ಗೊತ್ತಾಗ್ತಿರಲಿಲ್ಲ. ಹಸು ಕರು ಹಾಕಲಿ ಎಮ್ಮೆ ಕರು ಹಾಕಲಿ ಮೊದ ಮೊದಲು ಗಿಣ್ಣಿನ ಹಾಲಿರುತ್ತಲ್ಲ ಅದನ್ನ ಕಲ್ಲು ಇಟ್ಟು ಹಬೆಯಲ್ಲೇ ಬೇಯಿಸಿ ಒಳ್ಳೆ ಕೇಕ್ ಥರ ಮಾಡಿ ಕೊಡ್ತಿದ್ಲಲ್ಲ ಅವ್ವ. ಅದರ ರುಚೀನೆ ಬೇರೆ ಇತ್ತು! ಅವೆಲ್ಲ ನಮ್ಮ ತಲೆಮಾರಿಗೆ ಅಷ್ಟೇ ಗೊತ್ತೇನೋ. ಇವತ್ತಿನ ಮಕ್ಕಳಿಗೆ ಗಿಣ್ಣು ಅಂದ್ರೆ , ಉರುಳಿ ಕಾಳು ಅಂದ್ರೆ? ಹೂಂಹು ಅವರೆಲ್ಲ ಪಿಜ್ಜಾಗೆ ಮೊರೆ ಹೋದವರು... ಪೆಪ್ಸಿಗೆ ಮೊರೆ ಹೋದವರು... ಕುರ್ಕುರೆಗೆ ಮೊರೆ ಹೋದವರು. ಇರಲಿ.

ಈ ಬಾವಿ ಅಂತಂದನಲ್ಲ ಆ ವಿಷಯಕ್ಕೆ ಬರೋಣ. ಒಂದ್ಸಾರಿ ನಾನು ಅಕ್ಕ ಇಬ್ಬರೂ ಅದೇ ದಾರಿಯಲ್ಲಿ ಇಸ್ಕೂಲ್ ಮುಗಿಸಿಕೊಂಡು ಬರ್ತಾ ಇದ್ವಿ. ಬಾವಿ ಹತ್ರ ಬರೋದಕ್ಕೂ ಅದೇನೋ ಬಾವಿ ಒಳಕ್ಕೆ ದಡ್ ಅಂತ ಬೀಳುವುದಕ್ಕೂ ಸರಿ ಹೋಯ್ತು. ಅಕ್ಕ ಕಿಟಾರ್ ಅಂತ ಕಿರುಚಿದ್ಲು. ಅದರ ಹಿಂದೆಯೇ ನಾನೂ. ಇಬ್ಬರೂ ಅಲ್ಲಿ ಓಟಕಿತ್ತವರು ಮನೆಯ ಹೊಸ್ತಿಲ ತನಕ ನಿಲ್ಲಲಿಲ್ಲ. ಅವ್ವ ಗಾಬರಿಯಾಗಿ ಏನು ಅಂತ ಕೇಳಿದ್ರೆ ಹಿಂಗಿಂಗಾಯ್ತು ಅಂದ್ವಿ. ಅಪ್ಪ ಅವ್ವ ಆ ಕಡೆಯಿಂದ ಬರಬೇಡಿ. ಅಲ್ಲಿ ದೆವ್ವ ಇದೆಯಂತೆ ಅಂತ ನಾನು ಹೇಳಿರಲಿಲ್ವಾ? ಅಂತೆಲ್ಲ ಗದರಿಸಿದ ಮೇಲೆ ನಮಗೆ ಇನ್ನೂ ಭಯ ಹೆಚ್ಚಾಗಿ ಇಬ್ಬರೂ ಮೂರ್ನಾಲ್ಕು ದಿನ ಜ್ವರ ಬಂದು ಮಲಗಿದ್ವಿ. ಮಾರಮ್ಮನ ದೇವಸ್ತಾನಕ್ಕೆ ಕರ್ಕೊಂಡ್ ಹೋಗಿ ತಾಯ್ತಾ ಕಟ್ಟಿಸಿದ್ರು. ಕೆಂಪು ನೀರ್ ತೆಗದ್ರು... ಅದ್ಯಾವುದೋ ದೇವರ ದೂಳ್ತಾ ಹಚ್ಚಿದ್ರು...ತಡೆ ಹೊಡಿಸಿದ್ರು... ಕೊನೆಗೆ ಒಂದ್ ದಿನ ಜ್ವರ ಬಿಡ್ತು.ಆದ್ರೆ ಅಲ್ಲಿ ದೆವ್ವ ಆಗಿದ್ದು ಯಾರು? ಅನ್ನೋದು ಮಾತ್ರ ನಮಗೆ ಬಿಡದೇ ಕಾಡುತ್ತಿತ್ತು.ಆ ದೆವ್ವ ಬೇರೆ ಯಾರೂ ಅಲ್ಲ. ತುಂಬಾ ಹಿಂದೆ ನಮ್ಮೂರಲ್ಲಿ ಒಬ್ಬಳು ಹೆಣ್ಣುಮಗಳಿದ್ದಳು. ಇನ್ನೂ ಚಿಕ್ಕ ವಯಸ್ಸು ಆಕೀದು. ಮದುವೆ ಆಗಿ ಮೂರ್ನಾಲ್ಕು ವರ್ಷ ಆಗಿತ್ತಂತೆ. ಗಭರ್ಿಣಿ ಬೇರೆ. ಗಂಡ ದಿನ ಕುಡಿದು ಬಂದು ಗಲಾಟೆ ಮಾಡೋನಂತೆ. ಹೊಡೆಯೋನಂತೆ. ಗಂಡನ ಹೊಡೆತ ತಾಳಲಾರದೇ ಬೇಸತ್ತು ಆ ಬಾವಿಗೆ ಬಿದ್ದು ಸತ್ತೋದ್ಲಂತೆ. ಆ ಮೇಲೆ ಆಕೆ ಸೇಡಿನಿಂದ ಗಂಡನನ್ನೂ ಬಲಿ ತೆಗೆದುಕೊಂಡ್ಲಂತೆ. ಈಗಲೂ ಅಮಾಸೆ ಹುಣ್ಣಿಮೆಗೆ ಆ ಬಾವಿ ಹತ್ರ ಆಕೆ ಕೂತ್ಕಂಡು ಸರಿ ರಾತ್ರೀಲಿ ಅಳ್ತಾಳಂತೆ...ಇಷ್ಟೆಲ್ಲ ಹೇಳಿದಮೇಲೂ ಆ ಬಾವಿ ಕಡೆ ಹೋಗೋ ಗುಂಡಿಗೆ ಯಾರಿಗಿರುತ್ತೆ.ಆಮೇಲಿಂದ ಏನಿದ್ರೂ ನಮ್ದು ಮೇನ್ ರೋಡೇ.ಹೊಲದ ಮೇಲೆ ಹೋಗುವಾಗ ಬರುವಾಗ ತಿಂತಿದ್ದ ಹಾಲು ತುಂಬಿಕೊಂಡ ಕಾಚಕ್ಕೀ, ಮುಸುಕಿನ ಜೋಳ.. ಹಸಿ ಹಸೀ ಹೆಸರು ಕಾಳು... ಹತ್ತಿ ಹಣ್ಣು ಎಲ್ಲಾ ಆಗಾಗ್ಗೆ ನೆನಪಾಗುತ್ತೆ.

ಜೊತೆಗೆ ಈ ದೆವ್ವದ ಘಟನೆಯೂ.


Thursday, June 12, 2008

...ದಿ ನ್ಯೂಸ್


ಅವತ್ತಿನದು ಎಂದಿನಂತೆ ಮತ್ತೊಂದು ಬೆಳಗ್ಗೆ.

ಸಣ್ಣಗೆ ಮೈ ಹಿಂಡುತ್ತಿತ್ತು ಚಳಿ. ಸೋಮಾರಿ ಸೂರ್ಯ ಇನ್ನೂ ಎದ್ದಿರಲಿಲ್ಲವಾದ್ದರಿಂದ ನಿಯಾನ್ ದೀಪಗಳು ನಿಂತಲ್ಲೇ ತೂಗಡಿಸುತ್ತಿದ್ದವು. ಅದೇ ಸಮಯಕ್ಕೆ ಇಳಾಳನ್ನು ಹಿಂದೆ ಕೂರಿಸಿಕೊಂಡು ಪಲ್ಸರ್ನ ಕಿಬ್ಬೊಟ್ಟೆಗೆ ಒದ್ದ ಸಮಯ್. ಅದು ಬುಸುಗುಡುತ್ತಾ ಓಡತೊಡಗಿತು. ಹಾರಿಹೋಗುತ್ತಿದ್ದ ಪಲ್ಲು ಮೇಲೆ ಹುಸಿ ಮುನಿಸು ತೋರಿಸಿ ತನ್ನ ಮೃದು ಮಧುರ ಬಲಗೈಯ್ಯನ್ನ ಸಮಯ್ನ ಭುಜದ ಮೇಲಿಟ್ಟಳು ಇಳಾ. ಹುಡುಗ ಥ್ರಿಲ್ ಆಗಿ ಹೋದ. ಬೈಕ್ನ ಸ್ಪೀಡೋಮೀಟರ್ ಎಂಬತ್ತರ ಹತ್ತಿರ ಬಂದು ಜಕರ್್ ಹೊಡೆಯತೊಡಗಿತು.

ಅದು ಅವಳ ಆಸೆ. ತನ್ನ ಹುಡುಗ ಒಂದು ಬೈಕ್ ತೆಗೋಬೇಕು... ಅದರಲ್ಲ್ಲಿ ನಾನು ಹಿಂದೆ ಅವನನ್ನು ಗಟ್ಟಿಯಾಗಿ ಅಪ್ಪಿ ಕುಳಿತು ಊರೆಲ್ಲ ಸುತ್ತಬೇಕು. ಅದಕ್ಕಾಗಿ ಅಪ್ಪನ ಹತ್ತಿರ ಸುಳ್ಳು ಹೇಳಿ ಹಣ ಪಡೆದು ಡೌನ್ ಪೇಮೆಂಟ್ ಮಾಡಿ ಕಣ್ಣ ಕಪ್ಪಗಿನ ಪಲ್ಸರ್ ಕೊಡಿಸಿದ್ದಳು. ತನಗೆ ಅಪ್ಪ ಕೊಡುತ್ತಿದ್ದ ಪಾಕೆಟ್ ಮನಿಯಲ್ಲೇ ಉಳಿಸಿ ಅವನ ಇಎಮ್ಐ ತುಂಬುತ್ತಿದ್ದಳು. ಯಾಕೆ ಇದೆಲ್ಲ ಅಂದ್ರೆ ನನ್ನ ಕನಸಿನ ರಾಜಾ. ನೀನು ಬೈಕ್ ಮೇಲೆ ಕೂತ್ಕಂಡ್ರೆ ರಾಜನಂಗಿರ್ತೀಯ ಗೊತ್ತಾ? ನನಗೆ ನೀನು ಅಂದ್ರೆ ಅಷ್ಟಿಷ್ಟ ಅಂದ್ನಲ್ಲ, ಸುಮ್ನೆ ತಗೋ ಅಂದಿದ್ದಳು. ಸಮಯ್ ಕಣ್ಣುತುಂಬಿಕೊಂಡಿದ್ದ. ಬೈಕ್ ತೆಗೆದುಕೊಂಡ ಮೊದಲ ದಿನವೇ ಅದರ ಹೊಟ್ಟೆತುಂಬಾ ಪೆಟ್ರೊಲ್ ತುಂಬಿಸಿಕೊಂಡು ಇಬ್ಬರೂ ಇಡೀ ಬೆಂಗಳೂರನ್ನು ಸುತ್ತುಹಾಕಿದ್ದರು. ಶಾಪಿಂಗ್ ಮಾಡಿದ್ದರು. ಎಲ್ಲೆಲ್ಲೋ ನಿಲ್ಲಿಸಿ ಬೈಟೂ ಕಾಫಿ ಕುಡಿದಿದ್ದರು. ಕೊನೆಯಲ್ಲಿ ಗಾಡಿ ಚಂದಕ್ಕೆ ಓಡಿಸ್ತೀ ಕಣೋ. ಸ್ವಲ್ಪ ಸ್ಪೀಡ್ ಜಾಸ್ತಿ. ನಾನಿದೀನಲ್ಲ ಅದಕ್ಕಾ? ಅಂತ ಅವನ ಕೆನ್ನೆ ಗಿಂಡಿದ್ದಳು.. ಅದು ಇಳಾ ಪಾಲಿನ ಹ್ಯಾಪಿಯೆಸ್ಟ್ ಡೇ! ಇವನದೂ.

ಇವತ್ತೂ ಅದೇ ಖುಷಿಯಲ್ಲಿ ಪಲ್ಲು ಸರಿ ಮಾಡಿಕೊಂಡು ಕುಳಿತಳಲ್ಲ ಇಳಾ... ಅವಳ ಎದೆಯೊಳಗೇ ಎಂಥದೋ ಸಂತಸ ಜೀಕತೊಡಗಿತು. ನೀನು ಎಂಥ ಚಂದಕ್ಕಿದ್ದೀಯ ಗೊತ್ತಾ ಹುಡುಗ. ನಿನ್ನನ್ನ ಒಮ್ಮೆ ನೋಡಿದರೆ ಹಾಗೇ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಮಾತಾಡಬೇಕೆನಿಸುತ್ತದೆ. ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಹಾಗೇ ಎದೆಗಾನಿಸಿಕೊಂಡು ಸುಮ್ಮನೇ ಕೂರಬೇಕೆನಿಸುತ್ತದೆ. ನಿಜ್ಜ ಹೇಳ್ಲ, ನೀನು ಏನಾದರೂ ಹೀರೋ ಆಗಿದ್ದರೆ ಎಲ್ಲಾ ಹುಡುಗಿಯರ ಎದೆಯಲ್ಲಿ ಕೇವಲ ನೀನೇ ಇದ್ದುಬಿಡುತ್ತಿದ್ದೇ ಕಣೋ! ಹಾಗಾಗಲಿಲ್ಲವಲ್ಲ, ಥ್ಯಾಂಕ್ ಗಾಡ್! ಅಂತ ಕಿವಿಯಲ್ಲಿ ಪಿಸುಗುಡಬೇಕೆನಿಸಿತು. ಆದರೆ ಎನಿಮಿ ಹೆಲ್ಮೆಟ್ ಅಡ್ಡ ಬಂತು.

ಅಷ್ಟರಲ್ಲಿ ಬೈಕ್ ಸಣ್ಣದೊಂದು ತಿರುವಿನಲ್ಲಿ ರೊಂಯ್ ಅಂತ ಸದ್ದುಮಾಡುತ್ತಾ ಇಳಿಜಾರಿನಲ್ಲಿ ಮುಂದೆ ಸಾಗಿತು. ಹಿಂದೆ ಕುಳಿತ ಇಳಾ 'ಆಹ್' ಅಂತ ಉದ್ಘರಿಸಿದಳೋ ಇಲ್ಲವೋ ಇನ್ನೇನು ಬಿದ್ದೇ ಹೋಗುತ್ತೇನೇನೋ ಅನ್ನೋ ಭಯದಿಂದ ಅವನ ಬೆನ್ನಿಗೆ ಆತುಕೊಂಡಳು.

ಮೆಲ್ಲಗೆ ಕಣೋ ಭಯವಾಗುತ್ತೇ?ಹೌದಾ. ಒಂದ್ ನಿಮಿಷ ಚಿನ್ನ. ಈ ಹೆಲ್ಮೆಟ್ ತೆಗೀ. ಯಾಕೋ ಗಾಡಿ ಓಡಿಸೋದಕ್ಕೇ ಆಗ್ತಾ ಇಲ್ಲ ಅಂದ ಮೆಲ್ಲಗೆ ತಿರುಗಿ. ಯಾಕೋ...? ಭಯವಾಗ್ತಾ ಇದೆ ಅಂದ್ಯಲ್ಲ ಚಿನ್ನ. ಹೇಗಿದ್ರೂ ನನಗೆ ಅದು ಇರಿಟೇಟ್ ಮಾಡ್ತಾ ಇದೆ. ನೀನೇ ಹಾಕ್ಕೋ. ಆದ್ರೇ ಬೇಗ ತೆಗೀ ಅಂದ.ಇಳಾ ಹೆಲ್ಮೆಟ್ ತೆಗೆದು ಅದರಲ್ಲಿ ತನ್ನ ತಲೆ ತೂರಿಸಿಕೊಂಡಳು.

ಆ ಗಳಿಗೆಗಿನ್ನೂ ಎರಡು ಸೆಕೆಂಡ್ ಆಗಿರಲಿಲ್ಲ ದೊಡ್ಡದೊಂದು ಸೌಂಡ್.
***
ಮಾರನೇ ದಿನ ಪೇಪರ್ನಲ್ಲಿ ಸಣ್ಣದೊಂದು ನ್ಯೂಸ್ ಹೀಗಿತ್ತು.ಬ್ರೇಕ್ ಫೇಲ್ಯೂರ್ ಆದದ್ದು ಗೊತ್ತಾದ ಕೂಡಲೇ ಹುಡುಗ ತನ್ನ ಹುಡುಗಿಯಾದರೂ ಬದುಕಿಕೊಳ್ಳಲೀ ಅನ್ನೋ ಆಸೆಯಿಂದ ತಾನು ಹಾಕಿದ್ದ ಹೆಲ್ಮೆಟ್ ಅವಳಿಗೆ ಕೊಟ್ಟಿದ್ದ.

Monday, May 5, 2008

ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ...

ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ಸ್ಟಾಂಡಿನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ಗಳು, ಕ್ರಾಸ್ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ ನನಗೆ ಈ ಬೆಂಗಳೂರು ಪರಿಚಯವಾಗದೇ ಉಳಿದುಬಿಡುತ್ತಿತ್ತಾ? ಗೊತ್ತಿಲ್ಲ. ಪುಟ್ಟ ಮಗು ಕೈ ಹಿಡಿದು ನಡೆಯುವಂತೆ ನಾನು ಅವಳ ಕೈ ಹಿಡಿದು ನಡೆಯುತಿದ್ದರೆ ಅವಳು ಬೆಂಗಳೂರನ್ನು ಒಂದೊಂದಾಗಿ ತೋರಿಸುತ್ತಾ ಹೋಗುತ್ತಿದ್ದಳು. ನನ್ನ ಕಣ್ಣಲ್ಲಿ ಬೆರಗು, ಅವಳ ಕಣ್ಣಲ್ಲಿ ಸಾರ್ಥಕತೆ. ಬೆಂಗಳೂರಿನ ಬೀದಿಗಳನ್ನು ಸುತ್ತಿದ್ದೇ ಹಾಗೆ. ಸುತ್ತು ಹೊಡೆದು ಹೊಡೆದು ನಮ್ಮ ಕೊನೆಯ ನಿಲ್ದಾಣವಾಗುತ್ತಿದ್ದದ್ದು ಮಾತ್ರ ಕಲಾಕ್ಷೇತ್ರ. ಅಲ್ಲಿ ನಾನು ಅವಳು ಕುಳಿತು ನಾಟಕ ನೋಡುತ್ತಿದ್ದೆವು. ಪಾಪ್ ಕಾನರ್್ ತಿನ್ನುತ್ತಿದ್ದೆವು. ಕಡಲೆ ಕಾಯಿ ತಿನ್ನುತ್ತಿದ್ದೆವು. ನಮ್ಮ ಕೆಪಾಸಿಟಿ ಅಷ್ಟೆ ಆಗಿತ್ತು. ಒಮ್ಮೆಯೂ ಅವಳು ಐಸ್ಕ್ರೀಮ್ ಕೇಳಿದವಳಲ್ಲ. ಬಣ್ಣದ ಡ್ರೆಸ್ ಕೊಡಿಸೋ ಅಂತ ಹಟಕ್ಕೆ ಬಿದ್ದವಳಲ್ಲ. ಪಿಚ್ಚರ್ಗೋಗೋಣ ನಡೆಯೋ ಅಂತ ಕೈ ಹಿಡಿದು ಜಗ್ಗಿದವಳಲ್ಲ. ಅವಳು ಕೇಳಿದ್ದರೂ ನನಗೆ ಕೊಡಿಸುವ ತಾಕತ್ತಾದರೂ ಎಲ್ಲಿತ್ತು? ಅವಳೇ ಒಮ್ಮೆ ನಾನು ಊರಿಗೆ ಹೊರಟಾಗ ಐದು ರುಪಾಯಿನ ಕ್ಯಾಡ್ಬರೀಸ್ ಚಾಕ್ಲೆಟ್ ಕೊಡಿಸಿದ್ದಳು. ನಾನು ಅದನ್ನ ಪೆದ್ದುಪೆದ್ದಾಗಿ ಜತನದಿಂದ ಜೇಬಿನಲ್ಲೇ ಇಟ್ಟುಕೊಳ್ಳಲು ಹೋಗಿ ಮೈಸೂರು ತಲಪುವಷ್ಟರಲ್ಲಿ ಪಾಯಸದಂತಾಗಿತ್ತು.
ಇರಲಿ... ಆ ದಿನಗಳಲ್ಲಿ ನಾನು ಓಆರ್ಜಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ದಿನಕ್ಕೆ ತೊಂಬತ್ತು ರುಪಾಯಿ ಸಂಬಳ ಪ್ಲಸ್ ಇನ್ನೊಂದಿಷ್ಟು ಅದಕ್ಕೆ ಇದಕ್ಕೆ ಅಂತ ಸಿಗುತ್ತಿತ್ತು. ಯೂನಿಸೆಫ್ನವರ ಮಿಡ್ಡೇ ಮೀಲ್ ಬಗೆಗಿನ ಸವರ್ೆ ಅದು. ಗೆಳೆಯ ಶ್ರೀನಿವಾಸ್ನ ಗಿರಿನಗರದ ರೂಮಿನಲ್ಲೇ ಸ್ವಲ್ಪ ದಿನ ಉಳಿದುಕೊಂಡಿದ್ದೆ. ಹೊರಗೆ ಹೋದ್ರೆ ತಿಂಗಳುಗಟ್ಲೆ ಬರ್ತಿರಲಿಲ್ಲವಾದ್ದರಿಂದ ವಸತಿ ಸಮಸ್ಯೆ ಅಷ್ಟಿರಲಿಲ್ಲ. ಆದ್ರೂ ಇರಲಿ ಅಂತ ನಾನು ಗೆಳೆಯ ಹನೀಫ್ ಸೇರಿ ವಿಜಯನಗರದಲ್ಲೊಂದು ರೂಮ್ ಮಾಡಿದ್ವಿ. ಆ ರೂಮಿನ ಬಗ್ಗೆ ಬರೆದರೆ ಅದೇ ಒಂದು ಖಾಸ್ಬಾತ್ ಆದೀತು. ಅದನ್ನು ಮತ್ಯಾವಗಾದರು ಹೇಳ್ತೇನೆ.ಇಂಥ ಸಮಯದಲ್ಲಿ ನನ್ನಲ್ಲಿ ಕಾಸಿಗೆ ಬರ. ರೂಮ್ ಏನೋ ಕಷ್ಟ ಪಟ್ಟು ಮಾಡಿದ್ದೆ. ಆದ್ರೆ ಅಡುಗೆ? ಸ್ಟವ್ ಇಲ್ಲ. ಸೀಮೆ ಎಣ್ಣೆ ಇಲ್ಲ. ಹಾಸಿಕೊಳ್ಳಲು ನೆಟ್ಟಗೊಂದು ಚಾಪೆಯೂ ಇಲ್ಲ. ಹನೀಫ ರೂಮಿನಲ್ಲಿರುತ್ತಿದ್ದದ್ದೇ ಅಪರೂಪವಾದ್ದರಿಂದ ಅವನ ಚಾಪೆಯನ್ನೇ ನಾನು ಬಳಸಿಕೊಳ್ಳುತ್ತಿದ್ದೆ.ಆದ್ರೆ ಅಡುಗೆಗೆ ಏನು ಮಾಡುವುದು?ಒಮ್ಮೆ ಸವರ್ೆಗೆ ಟೀಮ್ ಸೆಲೆಕ್ಟ್ ಮಾಡುವ ಇಂಟರ್ ವ್ಯೂ ಇತ್ತು. ಎಲ್ಲೆಲ್ಲಿಂದಲೋ ಹುಡುಗ್ರು ಬಂದಿದ್ರು. ಅದರಲ್ಲೊಬ್ಬ ಹುಡುಗನ ಪರಿಚಯವಾಯಿತು. ಬೆಂಗಳೂರಿನವನೇ. ತುಂಬಾ ಆತ್ಮೀಯತೆಯಿಂದ ಮಾತಾಡಿಸಿದ. ಅದೂ ಇದು ಮಾತಾಡುತ್ತಾ ವಿಷಯ ಬದುಕಿನತ್ತ ಹೊರಳಿತು. ನನ್ನ ಪರಿಸ್ಥಿತಿ ಕೇಳಿ... ಅಯ್ಯೋ ಬನ್ನಿ ನಮ್ ಮನೆಗೆ ಅಂತ ಕರೆದೋಯ್ದ. ಅವನು ಕರೆದುಕೊಂಡು ಹೋದ ಏರಿಯಾ ಕೂಡ ನನಗೆ ನೆನಪಿಲ್ಲ. ಅವತ್ತು ಅವನ ಮನೆಯಲ್ಲಿ ಯಾರೂ ಇರಲಿಲ್ಲ. ಹೋದವನೆ ಅದೆಲ್ಲಿಟ್ಟಿದ್ದನೋ ಅಟ್ಟದ ಮೇಲಿದ್ದ ಒಂದು ಸ್ಟವ್ ತೆಗೆದು ಕೊಟ್ಟ. ಬತ್ತಿ ಸ್ಟವ್ ಅದು. ನಾನು ಸಂಕೋಚದಿಂದ ಬೇಡ ಅಂದೆ. ಇರಲಿ ತಗೊಳಿ ಅಂದ. ಬೇಡವೆಂದರೂ ಊಟ ಹಾಕಿದ. ನಾಳೆ ಸಿಕ್ತೇನೆ ಅಂತ ಬೀಳ್ಕೊಟ್ಟ.
ನಿಜ್ಜ ಹೇಳ್ಲ ಅದೇ ಸ್ಟವ್ನಿಂದಲೇ ನಾನು ಸುಮಾರು ದಿವಸ ಅನ್ನ ಬೇಯಿಸಿಕೊಂಡು ತಿಂದದ್ದು. ಟೊಮ್ಯಾಟೋ ಗೊಜ್ಜು ಮಾಡಿಕೊಂಡಿದ್ದು. ಬಿಸಿ ಬಿಸಿ ಆಮ್ಲೆಟ್ ಹಾಕಿಕೊಂಡಿದ್ದು. ಅವತ್ತು ಭೇಟಿಯಾದ ಆ ಗೆಳೆಯ ಮಾರನೆ ದಿನದಿಂದಲೇ ಕೆಲಸಕ್ಕೆ ಬರಲಿಲ್ಲ. ಸ್ಯಾಲರಿ ಸಾಲಲಿಲ್ಲವೋ ಮತ್ತಿನ್ನೇನೋ. ಅವತ್ತೇ ನಾವೆಲ್ಲ ಬಿಜಾಪುರಕ್ಕೆ ಹೊರಟು ಹೋದ್ವಿ. ಬರೋಬ್ಬರಿ ಒಂದೂವರೆ ತಿಂಗಳ ಸವರ್ೆ ಅದು. ಅವನ ಮುಖ ಮತ್ತೆ ನಾನು ನೋಡಲಿಲ್ಲ. ಆದ್ರೆ ಅವನು ಕೊಟ್ಟ ಆ ಸ್ಟವ್ ಮಾತ್ರ ನನ್ನಲ್ಲಿ ತುಂಬಾ ಕಾಲ ಉಳಿದಿತ್ತು.
ಬದುಕಿನ ಪಥದಲ್ಲಿ ಯಾರ್ಯಾರೋ ಎಲ್ಲೆಲ್ಲಿಂದಲೋ ಬಂದು ಸಹಾಯ ಮಾಡಿಬಿಡುತ್ತಾರೆ. ಅಂಥವರಿಂದಲೇ ಅಲ್ಲವೇ ಬದುಕು ಅವುಡುಗಚ್ಚಿ ಚಿಗಿತುಕೊಳ್ಳುತ್ತಾ ಹೋಗುವುದು. ಅವೆಲ್ಲ ಸಣ್ಣ ಸಣ್ಣ ಸಹಾಯಗಳಿರಬಹುದು. ಆದ್ರೆ ಇಡೀ ದಾರಿ ಸುಗಮವಾಗಿದ್ದು ಮಾತ್ರ ಅವರೆಲ್ಲರಿಂದಲೇ ಅನ್ನುವುದನ್ನ ಮರೆಯಬಾರದು.
ಯಾಕೋ ಇವತ್ತು ಬರೆಯುತ್ತಾ ಕುಳಿತವನಿಗೆ ಇದೆಲ್ಲ ನೆನಪಾಯಿತು.

Saturday, April 26, 2008

ಅಕ್ಕ ಹೇಳಿದ ಕುಡುಕನ ಪ್ರಸಂಗ...


ನನ್ನ ಭಾವನದೊಂದು ತೋಟ ಇದೆ ಊರಲ್ಲಿ. ಅವಾಗವಾಗ ಅಲ್ಲಿಗೆ ಹೋಗಿ ಬರೋದು ಅಭ್ಯಾಸ. ಹಾಗೆ ಹೋಗಲಿಲ್ಲ ಅಂದ್ರೆ ಭಾವ ಹುಷಾರು, ಒಂದಿನ ಹೋಗಿ ನೋಡಿದ್ರೆ ನಿಮ್ಮ ತೋಟಾನೆ ಇರೋಲ್ಲ ಅಂತ ನಾವು ರೇಗಿಸ್ತಿರ್ತೀವಿ. ಹಾಗಾಗಿ ರಜೆ ಸಿಕ್ಕಿದ್ರೆ ಸಾಕು ತೋಟ ಅಂತ ಭಾವ ಪರಾರಿ ಅಗಿಬಿಡ್ತಾರೆ.

ಈ ತೋಟ ನೋಡ್ಕೊಳೋಕೆ ಅಂತ ಅಲ್ಲೊಂದು ಸಂಸಾರ ಇಟ್ಟಿದಾರೆ. ಮಹಾನ್ ಕುಡುಕನಂತೆ ಆತ. ಆದ್ರೆ ಭಾವ ತೋಟಕ್ಕೆ ಹೋದಾಗ ಮಾತ್ರ ಆತ ಬಿಲ್ಕುಲ್ ಕುಡಿಯೋಲ್ಲವಂತೆ.

ಆದ್ರೆ ಅವತ್ತು ಆಗಿದ್ದೇ ಬೇರೆ. ಯಥಾ ಪ್ರಕಾರ ಇವರು ತೋಟಕ್ಕೆ ಹೋಗಿದ್ದಾರೆ. ಎಲ್ಲಾ ಸರಿ ಇದೆಯಾ ಅಂತ ನೋಡಿದಾರೆ. ಕೊನೆಗೆ ಒಂದು ಹೊಂಗೆ ಮರದ ಕೆಳಗೆ ಉಸ್ಸಪ್ಪ ಅಂತ ತೋಟದ ಮಾಲಿ ಜೊತೆ ಕುಳಿತಿದ್ದಾರೆ. ಅಷ್ಟರಲ್ಲಿ ಅದೇ ಊರಿನವನೊಬ್ಬ ಅಲ್ಲಿಗೆ ಬಂದಿದ್ದಾನೆ. ಅವನು ಬರುವ ರೀತಿ ನೋಡಿದರೆ ದೇವರು ಒಳಗಿದ್ದ ಅನಿಸುತ್ತಿತ್ತಂತೆ.ಬಂದವನು ದೊರೆ ಹತ್ತು ರುಪಾಯಿ ಕೊಡಿ ಅಂದವನೆ.ಭಾವ ಇಲ್ಲ ಹೋಗಿ ಅಂದಿದಾರೆ.ಅವನು ಬಿಟ್ಟಿಲ್ಲ. ಕೊನೆಗೆ ಹಾಳಾಗಿ ಹೋಗು ಅಂತ ಭಾವ ಹತ್ತು ರುಪಾಯಿ ಕೊಟ್ಟು ಅದನ್ನು ಮರೆತೂ ಬಿಟ್ಟಿದ್ದಾರೆ.

ಆದ್ರೆ ಹಾಗೆ ಈಸಿಕೊಂಡು ಹೋದವನು ಹಾಗೆ ಫುಲ್ ಟೈಟಾಗಿ ಬಂದು ಎದುರಿಗೆ ನಿಂತಾಗಲೇ ಇವರಿಗೆ ಗೊತ್ತಾಗಿದ್ದು ಇವನ ವರಸೆ ಬೇರೇನೆ ಇದೆ ಅಂತ.

ರೀ ಸ್ವಾಮಿ, ನನಗೆ ಕೇವಲ ಹತ್ತು ರುಪಾಯಿ ಕೊಡ್ತೀರಾ? ಎಷ್ಟು ಕೊಬ್ಬು ನಿನಗೆ? ಅಂದವನೆ.

ಭಾವ ಇದೊಳ್ಳೆ ಆಯ್ತಲ್ಲ, ದುಡ್ಡು ಕೊಟ್ಟುಬುಟ್ಟು ಉಗಿಸಿಕೊಂಡಂಗಾಯ್ತಲ್ಲ ಅಂದುಕೊಂಡು ಹೋಗಯ್ಯ ಅತ್ಲಾಗೆ ಅಂತ ಬಟ್ಟೆ ಕೊಡವಿಕೊಂಡು ಎದ್ದವರೆ.

ಮಾಲಿಯೂ ಹೋಯ್ತೀಯೋ ಇಲ್ಲ ಒದೆ ಬೇಕೋ ಅಂದವನೆ.

ಆದರೆ ಅವನು ಬಿಡಬೇಕಲ್ಲ.

ಎಲ್ಲಿಗ್ರಿ ಹೋಗ್ತೀರಾ? ನಂಗೆ ಹತ್ತು ರುಪಾಯಿ ಕೊಟ್ಟು ಅವಮಾನ ಮಾಡಿದೀರಾ? ನೀವು ಮಾತ್ರ ಸಾವಿರ ಗಟ್ಟಲೆ ಉಯ್ಕೊತೀರಾ? ನಮಗೆ ಮಾ.....ತ್ರ ....ಹ.....ತ್ತು ....ರು .......ಪಾಯೀನಾ? ಈಡಿಯಟ್....

ಇನ್ನೂ ಏನೇನೋ?

ಭಾವನಿಗೆ ಕೋಪ ಬಂದಿದೆ.

ಹೋಗ್ತೀಯ ಇಲ್ಲ ಒದೆ ಬೇಕಾ ಅಂದಿದಾರೆ.

ನೀನೇನು ಒದಿಯೋದು. ನಾನೆ ಒದೀತೀನಿ ತಗೋ ಅಂತ ಕಾಲೆತ್ತಿಕೊಂಡು ಬಂದವನು ಅಲ್ಲೇ ಮುಗ್ಗರಿಸಿ ಬಿದ್ದಿದ್ದಾನೆ.ಒಳ್ಳೆ ಕಥೆಯಾಯಿತಲ್ಲಪ್ಪ ಅಂತ ತೋಟದ ಕಾವಲುಗಾರ ಇವರು ಇಬ್ಬರೂ ಸೇರಿಕೊಂಡು ಎರಡು ತದುಕಿದ್ದಾರೆ.ಆಮೇಲೆ ಅಲ್ಲಿಂದ ಎದ್ದವನು ಸೀದಾ ಊರ ಕಡೆಗೆ ಮಾಯವಾಗಿದ್ದಾನೆ.

ಅವತ್ತಿಂದ ಭಾವ ಊರಿಗೋಗ್ತೀನಿ ಅಂದಾಗಲೆಲ್ಲ ಈ ಘಟನೆ ನೆನಪಾಗುತ್ತಂತೆ ಅಕ್ಕನ ಮನೆಯವರಿಗೆ.

ಹುಷಾರು ಅಪ್ಪ ಯಾರಿಗೂ ಕಾಸು ಕೊಡಬೇಡಿ. ಒದ್ದುಗಿದ್ದಾರು ಅಂತ ಮಗಳು ರೇಗಿಸ್ತಿರ್ತಾಳೆ.

ಇನ್ನೂ ಸ್ವಾರಸ್ಯ ಅಂದ್ರೆ ಇದೇ ವ್ಯಕ್ತಿ ಹಿಂದೊಮ್ಮೆ ಹೀಗೆ ಗಲಾಟೆ ಮಾಡಿದ್ದಾಗ ಅಲ್ಲೇ ಇದ್ದ ಬಾವಿಗೆ ಎತ್ತಿ ಹಾಕಿದ್ರಂತೆ.ಈ ಕುಡುಕನ ಪ್ರಸಂಗ ಹೇಳಿದ್ದು ನನ್ನ ಅಕ್ಕ. ಮೊನ್ನೆ ಮಂಡ್ಯಕ್ಕೆ ಹೋಗಿದ್ದಾಗ.